ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರತ್ನ, ನಟ ಪುನೀತ್ ರಾಜ್ಕುಮಾರ್ ನಮ್ಮೊಂದಿಗೆ ಇಲ್ಲ ವಾದರೂ ಸದಾ ಒಂದಲ್ಲ ಒಂದು ವಿಚಾರಗಳ ಮೂಲಕ ಎಲ್ಲರಲ್ಲಿ ನೆನಪಾಗುತ್ತಾ ಇರುತ್ತಾರೆ.
ಅಪ್ಪು ಅಂದರೆ ಆ ನಗು ಮುಖ, ಆ ಆತ್ಮೀಯ ಮಾತು ಎಂದಿಗೂ ಅಭಿಮಾನಿಗಳಿಗೆ, ಆಪ್ತರಿಗೆ, ಕುಟುಂಬದವರಿಗೆ ಮರೆಯಲಾಗದ ಗುಣಗಳು.
https://mobile.twitter.com/Ashwini_PRK/status/1590352221388279808?cxt=HHwWgMDQ-eq6iJIsAAAA
ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯ ಅನೇಕ ಸೆಲೆಬ್ರಿಟಿಗಳಿಗೂ ಅಪ್ಪು ಕಂಡರೆ ಅಚ್ಚುಮೆಚ್ಚು. ಅಪ್ಪು ಅವರ ನಗುಮುಖವನ್ನು ಇಷ್ಟಪಡದವರೇ ಇಲ್ಲ.
ಇದೀಗ ದಿಗ್ಗಜ ಬಾಲಿವುಡ್ ನಟ ಅಮಿತಾಭ್ ಬಚ್ಚನ್ಕೂಡ ಪುನೀತ್ ರಾಜ್ಕುಮಾರ್ ಸ್ಮೈಲ್ ಬಗ್ಗೆ ಮಾತನಾಡಿದ್ದಾರೆ.
ಈ ವಿಡಿಯೋವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಪುನೀತ್ ರಾಜ್ಕುಮಾರ್ ಅವರನ್ನು ನಾವೆಲ್ಲರೂ ಅಪ್ಪು ಅಂತ ಪ್ರೀತಿಯಿಂದ ಕರೆಯುತ್ತಿದ್ವಿ. ಅವರ ಬಗ್ಗೆ ಭೂತಕಾಲದಲ್ಲಿ ಮಾತನಾಡಲು ಕಷ್ಟ ಆಗುತ್ತದೆ’ ಎಂದು ಬಿಗ್ ಬಿ ಮಾತು ಆರಂಭಿಸಿದ್ದಾರೆ. ‘ಅವರು ಚಿಕ್ಕ ಬಾಲಕನಾಗಿದ್ದಾಗ ನಾನು ಮೊದಲ ಬಾರಿ ಭೇಟಿ ಮಾಡಿದೆ. ಯಾವಾಗ ಭೇಟಿ ಆದರೂ ಕೂಡ ಅವರ ಮುಖದಲ್ಲಿ ಸುಂದರವಾದ ನಗು ಇರುತ್ತಿತ್ತು. ನಮ್ಮಲ್ಲರಿಗೂ ಅವರು ಹತ್ತಿರವಾಗಲು ಆ ನಗುವೇ ಕಾರಣ ಅಂತ ನಾನು ನಂಬಿದ್ದೇನೆ’ ಎಂದಿದ್ದಾರೆ.
‘ಗಂಧದ ಗುಡಿ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರು ನಟಿಸಿಲ್ಲ. ಅವರು ತಾವಾಗಿಯೇ ಕಾಣಿಸಿಕೊಂಡಿದ್ದಾರೆ. ಸಮೃದ್ಧವಾದ ಕರ್ನಾಟಕದ ಕಾಡನ್ನು ಎಲ್ಲರಿಗೂ ಪರಿಚಯಿಸಿದ್ದಾರೆ. ಅಪ್ಪು ಅವರ ಮ್ಯಾಜಿಕಲ್ ಜರ್ನಿಯಲ್ಲಿ ಎಲ್ಲರೂ ಭಾಗವಹಿಸಿ. ಪರಿಸರದ ಜೊತೆ ಸಾಮರಸ್ಯದಿಂದ ಬದುಕುವ ಬಗ್ಗೆ ಪುನೀತ್ ಅವರು ಈ ಸಾಕ್ಷ್ಯಚಿತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ನಮ್ಮ ಮಕ್ಕಳಿಗಾಗಿ ಇರುವ ಚಿತ್ರ ಇದು. ನಾವೆಲ್ಲರೂ ನಮ್ಮ ಅರಣ್ಯ ಸಂಪತ್ತಿನ ಬಗ್ಗೆ ಹೆಮ್ಮೆ ಪಡುವಂತಹ ಚಿತ್ರ. ಗಂಧದ ಗುಡಿಗೆ ಯಶಸ್ಸು ಸಿಗಲಿ’ ಎಂದು ಅಮಿತಾಭ್ ಬಚ್ಚನ್ ಹೇಳಿದ್ದಾರೆ.
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಮಿತಾಭ್ ಬಚ್ಚನ್ ಅವರಿಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ. ‘ಅಮಿತಾಭ್ ಬಚ್ಚನ್ ಅವರೇ, ನಿಮ್ಮ ಈ ಭಾವನಾತ್ಮಕ ಮಾತುಗಳಿಗೆ ಮತ್ತು ವಿಶೇಷ ಸಂದೇಶಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು’ ಎಂದು ಅಶ್ವಿನಿ ಪೋಸ್ಟ್ ಮಾಡಿದ್ದಾರೆ.