ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡ ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ಮಾಜಿ ಪ್ರಧಾನಿ ಹತ್ಯೆಯಾದಾಗ ನಾನು ಮೂರು ದಿನಗಳ ಕಾಲ ಬಿಕ್ಕಿ ಬಿಕ್ಕಿ ಅತ್ತಿದ್ದೆ ಎಂದರು. ನಾನು ಕಾಂಗ್ರೆಸ್ ಕುಟುಂಬಕ್ಕೆ ಸೇರಿದವಳು, ಆದರೆ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರೋಪ ಹೊತ್ತು ಸೆರೆವಾದ ಅನುಭವಿಸಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿರಾಗಾಂಧಿ ನಿಧನರಾದಾಗಲೂ ಕೂಡಾ ನಾವು ಇಡೀ ದಿನ ಏನನ್ನೂ ತಿಂದಿರಲಿಲ್ಲ. ನಾಲ್ಕು ದಿನಗಳ ಕಾಲ ಕಣ್ಣೀರಾಕಿದ್ದೇವೆ. ಅಂಥದ್ದರಲ್ಲಿ ರಾಜೀವ್ ಗಾಂಧಿಯನ್ನು ಕೊಂದ ಆರೋಪ ನನ್ನ ಮೇಲಿದೆ. ಆರೋಪ ತೆರವಾದರೆ ಮಾತ್ರ ವಿಶ್ರಾಂತಿ ಪಡೆಯುತ್ತೇನೆ ಎಂದು ನಳಿನಿ ಶ್ರೀಹರನ್ ಹೇಳಿದ್ದಾರೆ. ನೀವು ನಿರಪರಾಧಿಯಾಗಿದ್ದರೆ ರಾಜೀವ್ ಗಾಂಧಿ ಹತ್ಯೆಯ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ನಳಿನಿ, ಈ ಕುರಿತು ನಾನು ಯಾರನ್ನೂ ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ ಹಾಗೆ ಮಾಡಿದ್ದರೆ ನಾನು 32 ವರ್ಷ ಜೈಲಿನಲ್ಲಿ ಇರುತ್ತಿರಲಿಲ್ಲ ಎಂದರು.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾದ ಮುರುಗನ್, ಸಂತನ್, ರಾಬರ್ಟ್ ಪಯಸ್ ಮತ್ತು ಜಯಕುಮಾರ್ ಇರುವ ತಿರುಚ್ಚಿ ವಿಶೇಷ ಶಿಬಿರಕ್ಕೆ ನಳಿನಿ ಶ್ರೀಹರನ್ ಭೇಟಿ ನೀಡಿದರು. ನಾಲ್ವರೂ ಪ್ರಸ್ತುತ ಗಡಿಪಾರು ಎದುರಿಸುತ್ತಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಅವರನ್ನು ಅವರು ಹೋಗಲು ಬಯಸುವ ಸ್ಥಳಗಳಿಗೆ ಕಳುಹಿಸಬೇಕು ನಳಿನಿ ಮನವಿ ಮಾಡಿದರು. ನಮ್ಮ ಮಗಳು ಹರಿತಾ ವಾಸಿಸುವ ದೇಶಕ್ಕೆ ಮುರುಗನ್ (ನಳಿನಿಯ ಪತಿ) ಅವರನ್ನು ಕಳುಹಿಸುವಂತೆ ನಾನು ಕಲೆಕ್ಟರ್ ಬಳಿ ಮನವಿ ಮಾಡಿರುವೆ. ಸಂತನ್ ಶ್ರೀಲಂಕಾಕ್ಕೆ ಹೋಗಲು ಬಯಸಿದ್ದು, ಉಳಿದ ಇಬ್ಬರು ಇನ್ನೂ ನಿರ್ಧರಿಸಿಲ್ಲ ಎಂದು ನಳಿನಿ ತಿಳಿಸಿದರು.