ಹೆಂಡತಿ ತವರಿಗೆ ಹೋದ ಸಿಟ್ಟಿನಲ್ಲಿ ಪೊಲೀಸ್ ಠಾಣೆಗೆ ‘ಬಾಂಬ್’ ಬೆದರಿಕೆ ಕರೆ ಮಾಡಿದ ಭೂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪತ್ನಿ ಜಗಳವಾಡಿ ತವರುಮನೆಗೆ ಹೋದ ಸಿಟ್ಟಿನಲ್ಲಿ ಪತಿ ಮಹಾಶಯನೊಬ್ಬ ಕಂಠ ಪೂರ್ತಿ ಮದ್ಯ ಸೇವಿಸಿ ಪೊಲೀಸ್ ಠಾಣೆಗೆ ‘ಬಾಂಬ್’ ಬೆದರಿಕೆ ಕರೆ ಮಾಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಿಂಚಿನ ದಾಳಿ ನಡೆಸಿದ ಪೊಲೀಸರು ಈ ‘ಭಯ ಉತ್ಪಾದಕ’ನನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದು ‘ನಶೆ’ ಇಳಿಸಿ ಜೈಲಿಗಟ್ಟಿದ್ದಾರೆ.

ಏನಾಗಿತ್ತು?
ಹೈದರಾಬಾದ್‌ನ ಸಂತೋಷ್ ನಗರದ ನಿವಾಸಿ ನ್ನಲಾದ ಅಕ್ಬರ್ ಖಾನ್ ರಿಕ್ಷಾ ಚಾಲಕನಾಗಿದ್ದು, ಪತ್ನಿಯೊಂದಿಗೆ ಜಗಳವಾಡಿದ್ದ. ಇದೇ ಸಿಟ್ಟಿನಲ್ಲಿ ಪತ್ನಿ ಮನೆ ತೊರೆದು ತವರುಮನೆಗೆ ತೆರಳಿದ್ದಳು. ಇದರಿಂದ ಕುಪಿತಗೊಂಡ ಖಾನ್, ಕುಡಿದ ಅಮಲಿನಲ್ಲಿ ಮಧ್ಯರಾತ್ರಿ ಸಯೀದಾಬಾದ್ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾನೆ. ಸಂತೋಷ್ ನಗರದ ದೇವಸ್ಥಾನ, ಮಸೀದಿ ನಡುವೆ ಬಾಂಬ್ ಇಡಲಾಗಿದೆ ಎಂದು ಹೇಳಿದ್ದಾನೆ.

ತಕ್ಷಣ ಅಲರ್ಟ್ ಆದ ಪೊಲೀಸರು, ಬಾಂಬ್ ನಿಷ್ಕ್ರೀಯ ದಳದ ನೆರವಿನಲ್ಲಿ ಸತತ ಎರಡು ತಾಸು ಶೋಧ ನಡೆಸಿದ್ದು, ಬಳಿಕ ಇದು ಹುಸಿ ಕರೆ ಎಂಬುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಬಳಿಕ ಕಾರ್ಯಾಚರಣೆಯಲ್ಲಿ ಕರೆ ಮಾಡಿದ ಯುವಕನನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ 18 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಮನೆಯಲ್ಲಿ ಪತ್ನಿ ಜೊತೆ ಜಗಳ ನಡೆದಿತ್ತು. ಈ ಕಾರಣಕ್ಕೆ ಪತ್ನಿ ಮನೆ ಬಿಟ್ಟು ತವರುಮನೆಗೆ ಹೋಗಿದ್ದಳು. ಇದರಿಂದ ನೊಂದು ಈ ಕೃತ್ಯ ನಡೆಸಿದ್ದೇನೆ ಎಂದು ಆತ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!