ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಸಂಘನಿಕೇತನದಲ್ಲಿ ನಡೆಯುತ್ತಿರುವ ‘ಕನ್ನಡ ಶಾಲಾ ಮಕ್ಕಳ ಹಬ್ಬ’ದಲ್ಲಿ ಪಾಲ್ಗೊಳ್ಳುವ ಮಂದಿಯನ್ನು ಇಲ್ಲಿನ ಪ್ರದರ್ಶಿನಿ ಮಳಿಗೆ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.
ವಿವಿಧ ಬಗೆಯ ಅಂಚೆ ಚೀಟಿಗಳು, ಹಳೆಯ ನಾಣ್ಯಗಳು, ಹಳೆಯ ನೋಟುಗಳು, 1965ಕ್ಕೂ ಹಿಂದಿನ ಹಳೆಯ ಪತ್ರಿಕೆಗಳು, ತಾಳೆಗರಿಗಳು ಈ ಪ್ರದರ್ಶಿನಿಯಲ್ಲಿದ್ದು ಆಕರ್ಷಣೆ ಪಡೆದುಕೊಂಡಿವೆ. ಶಾಲಾ ಮಕ್ಕಳಲ್ಲಿ ಕನ್ನಡ ನಾಡು, ನುಡಿ, ಸಾಧಕರ ಕುರಿತಾದ ಅಪೂರ್ವ ಮಾಹಿತಿಯುಳ್ಳ ಮತ್ತು ಸಾಮಾನ್ಯ ಜ್ಞಾನವನ್ನು ವೃದ್ಧಿಸುವ ಈ ಪ್ರದರ್ಶಿನಿಯನ್ನು ಡಾ.ಮಹೇಶ್ ಜೋಶಿ ಅವರು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ಕಳೆದ 45 ವರ್ಷಗಳಿಂದ ಅಂಚೆ ಚೀಟಿ, ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಮೂಲಕ ಜನತೆಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತಿರುವ ಮೂಡಬಿದಿರೆ ಜೈನ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಶಿಕ್ಷಕ ಆರ್. ರಾಜ್ಕುಮಾರ್ ಅವರು ಈ ಪ್ರದರ್ಶಿನಿಯಲ್ಲಿ ತಮ್ಮ ಅಂಚೆ ಚೀಟಿಗಳ ಸಂಗ್ರಹವನ್ನು ತೆರೆದಿಟ್ಟಿದ್ದಾರೆ. ಹಳೆಯದಾದ 2 ಲಕ್ಷಕ್ಕೂ ಅಧಿಕ ಅಂಚೆ ಚೀಟಿ, ನಾಣ್ಯ ಸಂಗ್ರಹ ಇವರಲ್ಲಿದ್ದು, ಇದುವರೆಗೆ 490ಕ್ಕೂ ಅಧಿಕ ಎಕ್ಸಿಬಿಷನ್ಗಳಲ್ಲಿ ಇವರು ಪಾಲ್ಗೊಂಡಿದ್ದಾರೆ. ಇನ್ನು ೩ ಸಾವಿರಕ್ಕೂ ಅಧಿಕ ಹಳೆಯ ಪತ್ರಿಕೆಗಳ ಸಂಗ್ರಹ ಹೊಂದಿರುವ ಉಮೇಶ್ ರಾವ್ ಎಕ್ಕಾರ್ ಅವರು ಪ್ರದರ್ಶಿನಿಯ ಹೈಲೈಟ್ ಆಗಿದ್ದಾರೆ. ಈಗಿನ ವಿದ್ಯಾರ್ಥಿಗಳು ಎಂದೂ ನೋಡದ ಹಳೆಯ ಪತ್ರಿಕೆಗಳ ಸಂಗ್ರಹವೇ ಇಲ್ಲಿದೆ.