ಸಿಂಹಕ್ಕೆ ಸಿಕ್ಕಾಪಟ್ಟೆ ಹಸಿವಾಗಿತ್ತು. ಎರಡು ದಿನದಿಂದ ಒಳ್ಳೆ ಬೇಟೆ ಸಿಕ್ಕಿಲ್ಲ, ಹಸಿವಿನ ಜೊತೆ ಕೋಪನೂ ಬಂದುಬಿಟ್ಟಿತ್ತು. ಯಾಕೆ ಒಂದು ಪ್ರಾಣಿಕೂಡ ಕಾಣ್ತಾ ಇಲ್ಲ ಎಂದು ಹುಡುಕಾಡುತ್ತಿತ್ತು.
ಎಷ್ಟು ಹುಡುಕಿದರೂ ಯಾವ ಪ್ರಾಣಿನೂ ಕಾಣ್ತಿಲ್ಲ. ಹಸಿವಿನಿಂದ ಸಿಂಹ ಎಷ್ಟು ಸುಸ್ತಾಗಿತ್ತು ಎಂದ್ರೆ ಎದ್ದು ಬೇಟೆ ಹೋಗೋಕೂ ಆಗ್ತಿಲ್ಲ. ಇದೇ ಸಮಯಕ್ಕೆ ಸಿಂಹಗೆ ಮೊಲವೊಂದು ಕಾಣಿಸ್ತು. ಮೊಲವನ್ನು ನೋಡಿ ಒಂದು ನಿಮಿಷ ಯೋಚನೆ ಮಾಡ್ತು.
ಈ ಮೊಲವನ್ನು ಹೊಡೆದು ತಿನ್ನಲಾ? ಮೊಲದಿಂದ ನನ್ನ ಹೊಟ್ಟೆ ತುಂಬತ್ತಾ? ಇದು ಇಷ್ಟು ಪುಟಾಣಿ ಇದೆ, ನನ್ನ ಹೊಟ್ಟೆ ಇಷ್ಟೊಂದಿದೆ. ಒಂದು ಜಿಂಕೆಯಾದ್ರೂ ಬೇಕಿತ್ತು ಅಂತ ಆಲೋಚನೆ ಮಾಡ್ತಾ ಇತ್ತು.
ಯಾವುದಕ್ಕೂ ಇರಲಿ ಅಂತ ಮೊಲವನ್ನು ಕೈಯಲ್ಲಿ ಹಿಡಿದೇ ಬಿಡ್ತು. ಆದರೆ ಸಿಂಹದ ಅದೃಷ್ಟ ನೋಡಿ, ಸಿಂಹಕ್ಕೆ ಅಲ್ಲೇ ದೂರದಲ್ಲಿ ಜಿಂಕೆ ಕೂಡ ಕಾಣಿಸ್ತು. ಊಟವೇ ಸಿಗುವಾಗ, ಉಪ್ಪಿನಕಾಯಿಯಲ್ಲಿ ಹೊಟ್ಟೆ ತುಂಬಿಸಿಕೊಳ್ಳೋಕೆ ಆಗುತ್ತಾ?
ಮೊಲವನ್ನು ಕೈಬಿಟ್ಟು ಜಿಂಕೆ ಹಿಂದೆ ಓಡಿತು. ಪ್ರಾಣಕ್ಕೆ ಕುತ್ತು ಬಂದಾಗ ಎಷ್ಟು ಶಕ್ತಿ ಹಾಕ್ತೀವಲ್ವಾ? ಅದೇ ರೀತಿ ಜಿಂಕೆ ತನ್ನೆಲ್ಲಾ ಶಕ್ತಿ ಹಾಕಿ, ಅಲ್ಲಿ ಇಲ್ಲಿ ಓಡಿ ಸಿಂಹದಿಂದ ತಪ್ಪಿಸಿಕೊಳ್ತು.
ಸಿಂಹಕ್ಕೆ ಈಗ ಉಪ್ಪಿನಕಾಯಿಯೂ ಇಲ್ಲ, ಊಟವೂ ಇಲ್ಲ. ಜಿಂಕೆ ಹಿಂದೆ ಓಡಿ ಇದ್ದ ಚೂರೂ ಪಾರೂ ಶಕ್ತಿನೂ ಹೋಗಿಬಿಟ್ಟಿತ್ತು. ಸುಸ್ತಾದ ಸಿಂಹ ಕುತ್ತ ಜಾಗದಲ್ಲೇ ಬಿದ್ದುಬಿಟ್ಟಿತು!
ನಮ್ಮ ಕಥೆ ಇಷ್ಟೆ. ಈಗ ನಿಮಗೆ ಇದರಿಂದ ಏನು ಅರ್ಥ ಆಯ್ತು? ಈ ಕಥೆಯಿಂದ ಯಾವ ಪಾಠ ಸಿಕ್ತು? ಕೈಯಲ್ಲಿರುವ ಒಂದು ಹಕ್ಕಿ, ಗೂಡಲ್ಲಿರುವ ಎರಡು ಹಕ್ಕಿಗಿಂತ ವಾಸಿ ಅಲ್ವಾ? ಕೈಯಲ್ಲಿ ಸಾಕಷ್ಟು ಕೆಲಸಗಳಿರುವಾಗ ದುರಾಸೆ ಬೇಡ. ಮೊದಲು ನಿಮ್ಮ ಹೊಟ್ಟೆ ತುಂಬಿಸಿಕೊಳ್ಳಿ, ನಂತರ ರಸದೌತಣಕ್ಕೆ ಕೈ ಹಾಕಿ. ದೊಡ್ಡದಕ್ಕೆ ಆಸೆ ಪಡುವುದು ಕೆಟ್ಟದಲ್ಲ ಆದರೆ ಸನ್ನಿವೇಶದ ಬಗ್ಗೆ ಅರಿವು, ನಿಮ್ಮ ಕೈಯಲ್ಲಿ ಬುದ್ದಿ ಇದ್ದರೆ ಸಾಕು.