ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ರಕರ್ತರ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ತನಿಖಾ ಸಂಸ್ಥೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ ಬೆಳಗ್ಗೆ ಕೇಂದ್ರಾಡಳಿತ ಪ್ರದೇಶದ ಮೂರು ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ನಡೆಸಿದ ಹುಡುಕಾಟಗಳಿಂದ ದೊರೆತ ಸುಳಿವುಗಳ ಆಧಾರದ ಮೇಲೆ ಶ್ರೀನಗರ, ಬದ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಶ್ರೀನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ವಿಷಯದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ನವೆಂಬರ್ 19 ರಂದು, ನಿಷೇಧಿತ ಭಯೋತ್ಪಾದಕ ಸಂಘಟನೆಯಿಂದ ಕಾಶ್ಮೀರ ಮೂಲದ ಪತ್ರಕರ್ತರಿಗೆ ಬೆದರಿಕೆಯ ಹಿನ್ನೆಲೆಯಲ್ಲಿ, ಶ್ರೀನಗರ ಪೊಲೀಸರು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿದರು. ಕಾಶ್ಮೀರದ ಪತ್ರಕರ್ತರು ಮತ್ತು ವರದಿಗಾರರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಲಷ್ಕರ್-ಎ-ತೊಯ್ಬಾ ಹಾಗೂ ಟಿಆರ್ಎಫ್ನ ಕಮಾಂಡರ್ ಸಜಾದ್ ಶೇಖ್ ಅಲಿಯಾಸ್ ಸಜಾದ್ ಗುಲ್, ಭಯೋತ್ಪಾದಕ ಮೋಮಿನ್ ಗುಲ್ಜಾರ್, ಫೋಟೊ ಜರ್ನಲಿಸ್ಟ್ ಮುಖ್ತಾರ್ ಅಹ್ಮದ್ ಬಾಬಾ ಅವರ ಮನೆಗಳಲ್ಲೂ ಪೊಲೀಸರು ಶೋಧ ನಡೆಸಿದ್ದಾರೆ. ಪತ್ರಕರ್ತರಿಗೆ ಬೆದರಿಕೆಯೊಡ್ಡಿರುವುದರ ಹಿಂದೆ ಇವರ ಕೈವಾಡ ಇರುವುದಾಗಿ ಶಂಕಿಸಿ ಶೋಧ ನಡೆದಿರುವುದಾಗಿ ವರದಿಯಾಗಿದೆ.