ಹೊಸದಿಗಂತ ವರದಿ ಬಾಗಲಕೋಟೆ:
ಕಾಂಗ್ರೆಸ್ ಪಕ್ಷದಲ್ಲಿ ಜಾತಿಯಾಧಾರಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದಿಲ್ಲ. ಯಾವುದೇ ರಾಜ್ಯದಲ್ಲಿಯೂ ಮಾಡಿಲ್ಲ. ಯಾರು ಸಮರ್ಥರಿದ್ದಾರೆ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.
ಬೀಳಗಿ ತಾಲ್ಲೂಕಿನ ಅನಗವಾಡಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋದಲ್ಲೆಲ್ಲಾ ಆಯಾ ಸಮುದಾಯದವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಘೋಷಣೆ ಹಾಕುತ್ತಾರೆ ಅದನ್ನು ನಿಲ್ಲಿಸೋಕೆ ಆಗುತ್ತಾ. ಎಲ್ಲ ಸಮುದಾಯದವರು ತಮ್ಮ ನಾಯಕ ಮುಖ್ಯಮಂತ್ರಿಯಾಗಬೇಕು ಎಂದು ಹೇಳುತ್ತಾರೆ. ಹಾಗೆಯೇ ದಲಿತ ಸಮುದಾಯದವರು ಸಿಎಂ ಆಗುತ್ತಾರೆ ಎಂದು ಹೇಳುತ್ತಾರೆ ಎಂದರು.
ವರದಿ ಬಂದರೆ ಕ್ರಮ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ ನಾನು ರಾಷ್ಟ್ರಮಟ್ಟದ ಶಿಸ್ತು ಪಾಲನಾ ಸಮಿತಿಯಲ್ಲಿದ್ದೇನೆ. ಕೇರಳ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕೆಪಿಸಿಸಿಯಿಂದ ನಮಗೆ ಏನಾದರೂ ಶಿಫಾರಸ್ಸು ಆದರೆ ಕ್ರಮ ಖಂಡಿತ ಕೈಗೊಳ್ಳುತ್ತೇವೆ ಎಂದರು.
ಸಿದ್ಧರಾಮಯ್ಯನವರ ಮೇಲೆ ಕ್ರಮ ಆಗುತ್ತಾ ಎಂದು ಮಾಧ್ಯಮದವರು ಕೇಳಿದಾಗ ಈ ವಿಷಯ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಎಲ್ಲವೂ ಗೊತ್ತಿದೆ. ಅವರಿಂದ ಏನಾದರೂ ವರದಿ ಬಂದರೆ ತಕ್ಷಣ ವರದಿ ಯಾರ ಮೇಲೆ ಬಂದಿರುತ್ತದೆ ಅವರ ಮೇಲೆ ಕ್ರಮ ಆಗಲಿದೆ ಎಂದು ಹೇಳಿದರು.
ಉಗ್ರನನ್ನು ಅಮಾಯಕ ಎಂದು ಡಿ.ಕೆ.ಶಿವುಕುಮಾರ್ ಹೇಳಿಲ್ಲ. ಉಗ್ರರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಹೇಳುವುದು ಚುನಾವಣಾ ಸಮಯದಲ್ಲಿ ಕಾಮನ್. ನಾವು ಹೇಳಿದ್ದನ್ನು ಜನಕ್ಕೆ ಬೇರೆ ರೀತಿ ತಿಳಿಸುವ ಕೆಲಸ ಮಾಡುತ್ತಾರೆ.