ಹೊಸ ದಿಗಂತ ಡಿಜಿಟಲ್ ಡೆಸ್ಕ್
ರಾಜಕಾರಣಿಗಳು ಎಂದರೆ ಮಾತೇ ಅವರ ಬಂಡವಾಳ ಎಂಬ ಮಾತಿದೆ. ಆದರೆ ಇತ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇನ್ನು ಒಂದು ವಾರ ಯಾರೊಂದಿಗೂ ಮಾತಾಡುವುದಿಲ್ಲ ಅಂತೆ.
ಹೌದು, ಕೇಜ್ರಿವಾಲ್ ಅವರು ವಿಪಶ್ಯನ ಧ್ಯಾನದ ಮೊರೆ ಹೋಗಿದ್ದಾರೆ. ಹಾಗಾಗಿ, ಅವರು ಇನ್ನೂ ಒಂದು ವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ಧ್ಯಾನಸ್ಥರಾಗಿಯೇ ಇರುವುದರಿಂದ ಯಾರೊಂದಿಗೂ ಮಾತನಾಡುವುದಿಲ್ಲ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಾನು ಇಂದಿನಿಂದ ವಿಪಶ್ಯನ ಧ್ಯಾನ ಕೈಗೊಳ್ಳುತ್ತಿದ್ದೇನೆ. ನಾನು ವರ್ಷದಲ್ಲಿ ಒಮ್ಮೆಯಾದರೂ ಈ ಧ್ಯಾನ ಮಾಡುತ್ತೇನೆ. ಹಾಗಾಗಿ, ಮತ್ತೆ ಜನವರಿ 1ರಂದು ನಿಮ್ಮೆದುರು ಬರುತ್ತೇನೆ. 100 ವರ್ಷದ ಹಿಂದೆ ಭಗವಾನ್ ಬುದ್ಧ ಈ ಧ್ಯಾನವನ್ನು ಪರಿಚಯಿಸಿದ್ದಾರೆ. ನೀವು ಯಾವಾಗಲಾದರೂ ಈ ಧ್ಯಾನ ಮಾಡಿದ್ದೀರಾ? ಇದನ್ನು ಮಾಡುವುದರಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಲಾಭವಿದೆ. ಹಾಗಾಗಿ ನೀವೂ ಮಾಡಿ’ ಎಂಬುದಾಗಿ ಸಲಹೆ ನೀಡಿದ್ದಾರೆ.