ಹೊಸದಿಗಂತ ವರದಿ, ಹಳಿಯಾಳ:
ಕಬ್ಬು ಬೆಳೆಗಾರ ಸಂಘಟನೆಯಿಂದ ರೈತರನ್ನೊಳಗೊಂಡು ತಮ್ಮ ಬೇಡಿಕೆ ಈಡೆರಿಸುವಂತೆ ಆಗ್ರಹಿಸಿ ಸಾವಿರಾರು ಕಬ್ಬು ಬೆಳೆಗಾರ ರೈತರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹಳಿಯಾಳ ಪೊಲೀಸರು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘಟನೆಯ ಉ.ಕ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಅವರನ್ನು ಭಾನುವಾರ ಸಂಜೆ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಈ ಬಂಧನ ಖಂಡಿಸಿ ಇದು ಪೋಲಿಸರ ದಬ್ಬಾಳಿಕೆಯ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾಹಳಿಯಾಳ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿರುವ ಕಬ್ಬು ಬೆಳೆಗಾರ ರೈತರು ಕೂಡಲೇ ಬಂಧಿತ ಅಧ್ಯಕ್ಷರನ್ನು ಬಿಡುಗಡೆಗೆ ಆಗ್ರಹ ಮಾಡಿದ್ದಾರೆ.
ಪಟ್ಟಣದ ಪೋಲಿಸ್ ಠಾಣೆಯ ಪ್ರಮುಖ ಛತ್ರಪತಿ ಶಿವಾಜಿ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬೆಳೆಗಾರ ಸಂಘದ ರಾಜ್ಯ ಉಪಾಧ್ಯಕ್ಷ ಎಮ್ ವಿ ಘಾಡಿ, ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ಕಾರ್ಯದರ್ಶಿ ಅಶೋಕ ಮೇಟಿ, ಪ್ರಮುಖರಾದ ಮಂಜುಳಾ ಗೌಡಾ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಎನ್.ಎಸ್.ಜೀವೋಜಿ, ಸುರೇಶ ಶಿವಣ್ಣವರ, ಸಾತೂರಿ ಗೋಡಿಮನಿ, ರಾಮದಾಸ ಬೆಳಗಾಂವಕರ ಇತರರು ಇದ್ದಾರೆ