ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದು, ಸಾವಿರಾರು ಭಕ್ತರು ಸ್ವಾಮೀಜಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸರಳ ಜೀವನದಲ್ಲಿ ನಂಬಿಕೆ ಇಟ್ಟಿದ್ದ ಶ್ರೀಗಳು ಅಭಿವಂದನ ಪತ್ರ ಬರೆದಿಟ್ಟಿದ್ದು, ಬದುಕಿನ ಸತ್ಯವನ್ನು ಸಾರಿದ್ದಾರೆ. ಇಲ್ಲಿ ತಮ್ಮ ಅಂತಿಮ ವಿಧಿ ವಿಧಾನಗಳು ಹೇಗಿರಬೇಕು ಎಂದು ಬರೆದಿದ್ದಾರೆ.
2014 ರ ಗುರುಪೂರ್ಣಿಮೆ ದಿನ ತಮ್ಮ ಅಂತಿಮ ಅಭಿವಂದನ ಪತ್ರವನ್ನು ಶ್ರೀಗಳು ಬರೆದಿದ್ದರು. ಈ ಪತ್ರಕ್ಕೆ ನ್ಯಾಯಾಧೀಶರ ಸಹಿಯೂ ಆಗಿದೆ. ದೇಹವನ್ನು ಭೂಮಿಯಲ್ಲಿ ಇಡುವ ಬದಲು ಅಗ್ನಿಗೆ ಅರ್ಪಿಸಿ. ಶ್ರಾದ್ಧಿಕ ವಿಧಿ ವಿಧಾನಗಳು ಅನಗತ್ಯ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸಿ. ಯಾವದೇ ಬಗೆಯ ಸ್ಮಾರಕ ನಿರ್ಮಾಣ ಬೇಡ ಎಂದು ಬರೆದಿದ್ದಾರೆ.
ಶ್ರೀಗಳ ಇಚ್ಛೆಯಂತೆ ಇಂದು ಸಂಜೆ ಆಶ್ರಮದ ಆವರಣದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಗಣ್ಯರು ಪಾಲ್ಗೊಳ್ಳಲಿದ್ದಾರೆ.