ಹೊಸ ದಿಗಂತ ವರದಿ, ಮೈಸೂರು:
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ಬಹಳ ಲಘುವಾಗಿ ನೀಡಿರುವ ಹೇಳಿಕೆ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಿಡಿಕಾರಿದರು
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ಉನ್ನತ ಹುದ್ದೆ. ಸಿದ್ದರಾಮಯ್ಯ ಅವರೂ ಮುಖ್ಯಮಂತ್ರಿ ಆಗಿದ್ದವರು, ಐದು ವರ್ಷ ಆಡಳಿತ ಮಾಡಿದ್ದವರು. ಕೋವಿಡ್ ಬಂದ ಮೇಲೆ ಏನೇನೋ ಮಾತನಾಡೋದಲ್ಲ.
ಸಿದ್ದರಾಮಯ್ಯನವರೇ ರಾಹುಲ್ ಗಾಂಧಿ ನಿಮಗಿಂತ ಜ್ಯೂನಿಯರಾ? ಸೀನಿಯರಾ? ರಾಹುಲ್ ಗಾಂಧಿ ಮುಂದೆ ನೀವು ಹೇಗೆ ಮಾತನಾಡುತ್ತೀರಿ? ಅವರ ಮುಂದೆ ಕಾಲಮೇಲೆ ಕಾಲು ಹಾಕಿಕೊಂಡು ಕೂತ್ಕೋತಿರೋ? ಎಂದು ಪ್ರಶ್ನಿಸಿದರು
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕದ ಚಾಣಕ್ಯ. ಕೇಂದ್ರದಲ್ಲಿ ಇರೋದು ನಮ್ಮದೇ ಸರ್ಕಾರ. ಹೀಗಿರುವಾಗ ಹೆದರಿಕೆ ಏಕೆ? ಪ್ರಧಾನಿಗಳಿಗೆ ಏನು ಗೌರವ ಕೊಡಬೇಕು, ಪ್ರಧಾನಿ ಸ್ಥಾನಕ್ಕೆ ಏನು ಗೌರವ ಕೊಡಬೇಕೋ ಅದನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.
ಕೋವಿಡ್ ಗೆ ಮುಂಚೆ ಸಿದ್ದರಾಮಯ್ಯ ಚೆನ್ನಾಗಿದ್ದರು. ಎರಡು ಬಾರಿ ಕೋವಿಡ್ ಬಂದ ಮೇಲೆ ಇಂಜೆಕ್ಷನ್ ತೆಗೆದುಕೊಳ್ಳಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದೆ. ಯಾಕೋ ಇತ್ತೀಚೆಗೆ ಏನೇನೋ ಮಾತನಾಡುತ್ತೀರಿ, ಬೂಸ್ಟ್ರ್ ಡೋಸ್ ತೆಗೆದುಕೊಳ್ಳಿ ಸಿದ್ದರಾಮಯ್ಯ ಅವರೇ ಎಂದು ಹೇಳಿದೆ. ಆದರೆ ಅವರು ತೆಗೆದುಕೊಂಡಿಲ್ಲ. ಹಾಗಾಗಿ ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರಿಗೆ ಹೇಳಿ,ಬೂಸ್ಟರ್ ಡೋಸ್ನ್ನು ಸಿದ್ದರಾಮಯ್ಯನವರಿಗೆ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ವ್ಯಂಗ್ಯವಾಗಿ ಹೇಳಿದರು.