ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಸಾಗುತ್ತಿದ್ದು, ಸದ್ಯ, ಹರಿಯಾಣಕ್ಕೆ ಬಂದು ತಲುಪಿದ್ದು, ಈ ವೇಳೆ ಪತ್ರಕರ್ತರ ಜೊತೆ ಮಾತನಾಡುತ್ತಾ ನೀಡಿದ್ದ ಹೇಳಿಕೆ ಇದೀಗ ವೈರಲ್ ಆಗಿದೆ.
‘ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿದ್ದಾರೆ. ಆದರೆ, ನಾನು ನನ್ನೊಳಗಿನ ರಾಹುಲ್ ಗಾಂಧಿಯನ್ನು ಕೊಂದಿದ್ದೇನೆ. ನಿಮ್ಮ ಎದುರು ಕುಳಿತು ಮಾತನಾಡುತ್ತಿರುವ ವ್ಯಕ್ತಿ ರಾಹುಲ್ ಗಾಂಧಿ ಅಲ್ಲ. ನೀವು ರಾಹುಲ್ ಗಾಂಧಿಯನ್ನು ನೋಡುತ್ತಿದ್ದೀರಿ ನಿಜ, ಆದರೆ, ಆತ ರಾಹುಲ್ ಗಾಂಧಿ ಅಲ್ಲ’ ಎಂದು ಹೇಳುವ ಮೂಲಕ ತಲೆಗೆ ಹುಳ ಬಿಟ್ಟಂತೆ ಮಾಡಿದ್ದಾರೆ.
ಮತ್ತೆ ಮಾತು ಮುಂದುವರಿಸಿ ನಾನು ಹೇಳಿದ ಮಾತಿನ ಅರ್ಥ ತಿಳಿಯಲು ಹಿಂದು ಧರ್ಮವನ್ನು ಅರ್ಥ ಮಾಡಿಕೊಳ್ಳಿ. ಶಿವನ ಬಗ್ಗೆ ಓದಿಕೊಳ್ಳಿ. ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿದ್ದಾನೆ. ಬಿಜೆಪಿಯ ಮನಸ್ಸಿನಲ್ಲಿದ್ದಾನೆ. ನನ್ನ ಕುರಿತು ಯಾರು ಯೋಚನೆ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ನೀವು ಏನು ಬೇಕಾದರೂ ತಿಳಿದುಕೊಳ್ಳಿ. ನಾನು ನನ್ನ ಕೆಲಸ ಮಾಡುತ್ತೇನೆ ಎಂದು ಎಂದಿದ್ದಾರೆ.