ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಲವಂತದ ಮತಾಂತರ ದೇಶದ ಭದ್ರತೆಗೆ ಅಪಾಯಕಾರಿಯಾಗಿವೆ. ಇವುಗಳಿಗೆ ರಾಜಕೀಯ ಬಣ್ಣ ಬಳಿಯಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಸಿ.ಟಿ.ರವಿಕುಮಾರ್ ನೇತೃತ್ವದ ನ್ಯಾಯಪೀಠ, ಬಲವಂತದ ಮತಾಂತರಗಳು ಅಪಾಯಕಾರಿಯಾಗಿವೆ. ಪ್ರಕರಣದಲ್ಲಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ನೆರವು ಬೇಕು. ಮತಾಂತರಗಳು ಹೇಗೆ ನಡೆಯುತ್ತಿವೆ, ಹೇಗೆ ಇವುಗಳನ್ನು ತಡೆಯಬಹುದು, ಸುಧಾರಣೆ ಕ್ರಮಗಳು ಯಾವವು ಎಂಬುದರ ಕುರಿತು ಚರ್ಚೆಯಾಗಬೇಕು ಎಂದು ಹೇಳಿದೆ.
ಆಮಿಷವೊಡ್ಡಿ, ಹಣಕಾಸು ನೆರವು ನೀಡಿ, ಬೆದರಿಕೆ ಹಾಕಿ, ವಂಚಿಸಿ ಮತಾಂತರ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕು ಎಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಕುರಿತು ಅಭಿಪ್ರಾಯಪಟ್ಟಿದೆ.
ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದ ವಕೀಲ ಪಿ.ವಿಲ್ಸನ್, ‘ರಾಜಕೀಯ ದುರುದ್ದೇಶದಿಂದ ಮತಾಂತರ ಕುರಿತು ಅರ್ಜಿ ಸಲ್ಲಿಸಲಾಗಿದೆ ಎಂದರು. ನ್ಯಾಯಪೀಠ, ‘ಮತಾಂತರವು ಗಂಭೀರ ವಿಷಯವಾಗಿದೆ. ಯಾವುದೇ ಕಾರಣಕ್ಕೂ ಇಂತಹ ವಿಷಯಗಳಿಗೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದು ತಿಳಿಸಿತು.