ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿಗೆ ಕೃಷಿ ಪ್ರಧಾನ ದೇಶವಾಗಿರೋ ಭಾರತವು ಜಗತ್ತಿನಲ್ಲಿಯೇ ಎರಡನೇ ಅತಿದೊಡ್ಡ ಅಕ್ಕಿಯುತ್ಪಾದಕನಾಗಿ ಹೊರಹೊಮ್ಮಿದೆ. ಪ್ರಾಚೀನ ಕಾಲದಿಂದಲೂ ಭಾರತ ಅಕ್ಕಿಬೆಳೆಗೆ ಹೆಸರುವಾಸಿಯಾಗಿರೋ ದೇಶ. ಜಗತ್ತಿನಲ್ಲಿಯೇ ಎಲ್ಲೂ ಇಲ್ಲದಷ್ಟು ವೈವಿಧ್ಯಮಯ ಭತ್ತದ ತಳಿಗಳು ಭಾರತದಲ್ಲಿವೆ. ಪುರಿಯ ಜಗನ್ನಾಥನಿಗೆ ವರ್ಷಪೂರ್ತಿಯೂ ಪ್ರತಿ ಹೊತ್ತಿಗೂ ಬೇರೆ ಬೇರೆ ತಳಿಯ ಅಕ್ಕಿಯ ಅನ್ನವನ್ನು ನೈವೇದ್ಯ ಮಾಡಲಾಗುತ್ತದೆ. ಇಂದು ಮಾಡಿದ ನೈವೇದ್ಯ ಮತ್ತೆ ಮುಂದಿನ ವರ್ಷವೇ ಸಿಗೋದು ಅಲ್ಲಿಯವರೆಗೂ ಭಿನ್ನ ಭಿನ್ನ ತಳಿಯ ಅಕ್ಕಿಗಳನ್ನುಣ್ಣುತ್ತಾನೆ ಪುರಿಯ ಜಗನ್ನಾಥ. ಭಾರತದ ಕೃಷಿಯ ಶ್ರೀಮಂತಿಕೆ ಇದರಲ್ಲಿಯೇ ವ್ಯಕ್ತವಾಗುತ್ತದೆ.
ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಭತ್ತದ ಉತ್ಪಾದನೆ ಕಡಿಮೆಯಿತ್ತು. 1963-64 ಸಮಯದಲ್ಲಿ 370 ಲಕ್ಷಟನ್ ಭತ್ತದ ಉತ್ಪಾದನೆಯಾಗುತ್ತಿತ್ತು. ಈ ಸಂಖ್ಯೆಯಲ್ಲಿ ಏರಿಕೆಯಾಗಿ ಹೆಚ್ಚು ಕಡಿಮೆ ನಾಲ್ಕು ಪಟ್ಟು ಏರಿಕೆಯಾಗಿದೆ. 2021-22ರ ಸಮಯದಲ್ಲಿ 1302.9ಲಕ್ಷ ಟನ್ ಭತ್ತವನ್ನು ಉತ್ಪಾದಿಸಿದೆ ಭಾರತ. ಅದಕ್ಕಾಗಿಯೇ ʼಕೃಷಿತೋ ನಾಸ್ತಿ ದುರ್ಭಿಕ್ಷಂʼ ಅಂತ ಜಗತ್ತಿಗೆ ಭಾರತ ನೀತಿಪಾಠವನ್ನು ಹೇಳಿರುವುದು.