ಹೊಸದಿಗಂತ ವರದಿ, ಬಳ್ಳಾರಿ:
ಜಿಲ್ಲಾಡಳಿತ ಮೊದಲ ಬಾರಿಗೆ ಆಯೋಜಿಸಿದ ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಉತ್ಸವ ಹಿನ್ನೆಲೆ ಶುಕ್ರವಾರ ಆಯೋಜಿಸಿದ ರಂಗೋಲಿ ಸ್ಪರ್ಧೆ ನೋಡುಗರ ಗಮನಸೆಳೆಯಿತು.
ನಗರದ ಜಿಲ್ಲಾದಿಕಾರಿ ಕಚೇರಿ ಆವರಣದಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದು, ಯುವತಿಯರು, ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ ಸಂಭ್ರಮಿಸಿದರು.
ಇದಕ್ಕೂ ಮುನ್ನ ಮಹಾನಗರ ಪಾಲಿಕೆ ಮೇಯರ್ ಅವರು ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಬಳ್ಳಾರಿ ಉತ್ಸವದ ಸಂಭ್ರಮ ಮುಗಿಲು ಮುಟ್ಟಿದೆ, ಜನರಲ್ಲಿ ದಿನದಿಂದ ದಿನಕ್ಕೆ ಉತ್ಸುಕತೆ ಹೆಚ್ಚಾಗುತ್ತಿದೆ, ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಮುಖ್ಯ ವೃತ್ತಗಳಲ್ಲಿ ಹಾಕಲಾಗಿದ್ದ ರಂಗೋಲಿ ಚಿತ್ತಾರಗಳು ಗಮನಸೆಳೆಯುತ್ತಿವೆ, ಈ ರಂಗೋಲಿ ಸ್ಪರ್ಧೆ ಹಿನ್ನೆಲೆ ಬೆಳಗಿನ ಜಾವದಿಂದಲೇ ಯುವತಿಯರು ಮತ್ತು ಮಹಿಳೆಯರು ಕೈಯಲ್ಲಿ ರಂಗೋಲಿ ಹಿಡಿದು ಮುಖ್ಯ ವೃತ್ತಗಳಲ್ಲಿ ಹಾಗೂ ನಗರದ ಮುಖ್ಯ ರಸ್ತೆಗಳಲ್ಲಿ ರಂಗೋಲಿ ಬಿಡಿಸಿರುವುದು, ವಿಶೇಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಕೀನಾ ಅವರು ಮಾತನಾಡಿ, ಬಳ್ಳಾರಿ ಉತ್ಸವದ ನಿಮಿತ್ತ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಎರಡು ಸುತ್ತಿನ ಸ್ಪರ್ಧೆ ಇದಾಗಿದೆ, ಸಾಂಪ್ರದಾಯಿಕ (ಚುಕ್ಕಿ) ಮತ್ತು ಕಲಾಕೃತಿ ಆಧಾರದ ಮೇಲೆ ಎರಡನೇಯ ಸುತ್ತಿಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.ವಿಜೇತರಾದವರಿಗೆ ಮೊದಲ ಬಹುಮಾನ ಪಡೆದವರಿಗೆ 3 ಸಾವಿರ, ಎರಡನೇ ಬಹುಮಾನ .2 ಸಾವಿರ ಹಾಗೂ ತೃತೀಯ ಬಹುಮಾನ.1 ಸಾವಿರ ರೂ. ನಗದು ಬಹುಮಾನದ ಜೊತೆಗೆ 4 ಸಮಾಧನಕರ ಬಹುಮಾನ, ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಿಡಿಪಿಓ ಉಷಾ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ರಾಮಣ್ಣ, ಮೌನೇಶ್, ಡಬ್ಲ್ಯೂಸಿಡಿ ನಾಗವೇಣಿ, ವಾರ್ಡನ್ ಉಷಾ, ಅಂಬಿಕಾ ಸೇರಿದಂತೆ ಇತರರು ಇದ್ದರು.