ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಬಣ ರಾಜಕಾರಣಕ್ಕೆ ಅವಕಾಶವಿಲ್ಲ ನಮ್ಮದು ಒಂದೇ ಪಾರ್ಟಿ, ಯಾರು ಬಿಜೆಪಿ ರಾಜಕಾರಣ ಮಾಡ್ತಾರೆ ಅವರಿಗೆ ಭವಿಷ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಇದರಿಂದ ವಿಧಾನಸಭೆ ಚುನಾವಣೆಯಲ್ಲಿ 18 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಹಾಲಿ ಶಾಸಕರಿರುವ ಕ್ಷೇತ್ರದಲ್ಲಿ ಟಿಕೆಟ್ ಫೈಟ್ ವಿಚಾರ ಪ್ರತಿಕ್ರಿಯಿಸಿ, ಬಿಜೆಪಿ ಟಿಕೆಟ್ ಕೇಳುವುದು ಅಪರಾಧ ಅಲ್ಲ ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಅವಕಾಶವಿದೆ, ಪಕ್ಷಕ್ಕೆ ಒಂದು ಚೌಕಟ್ಟಿದೆ. ಆ ಚೌಕಟ್ಟಿನೊಳಗೆ ಪಕ್ಷ ಯಾವ ಸಂದರ್ಭ ಬಯಸುತ್ತದೆಯೋ ಆಗ ಚರ್ಚೆ ಆಗಲಿದೆ ಟಿಕೆಟ್ ವಿಚಾರ ಬಿಜೆಪಿಯಲ್ಲಿ ಹಾದಿ ಬೀದಿಯಲ್ಲಿ ಚರ್ಚಿಸುವ ವಿಷಯವಲ್ಲ. ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು, ಅದನ್ನ ಮಾಡ್ತೇವೆ ಯಾರು ಗೆಲ್ಲುತ್ತಾರೆ, ಯಾರಿಗೆ ಹೆಚ್ಚು ಜನಪ್ರಿಯತೆ ಇರುತ್ತದೆ ಎಂಬುದನ್ನು ಆಧರಿಸಿ ಪಕ್ಷ ಟಿಕೆಟ್ ನೀಡುತ್ತದೆ ಎಂದು ಹೇಳಿದರು.
ನಾವು 150ಕ್ಕೂ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ
ರಾಜ್ಯದಲ್ಲಿ 150 ಪ್ಲಸ್ ಟಾರ್ಗೆಟ್ ನಮ್ಮದು ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳು ಪ್ರತಿಕ್ಷೇತ್ರದಲ್ಲಿ ಶೇ 70 ರಿಂದ 80 ರಷ್ಟು ಇದ್ದಾರೆ. ಅವರನ್ನ ಮತದಾರರಾಗಿ ಪರಿವರ್ತಿಸಿದರೆ ಯಾವುದೇ ಕ್ಷೇತ್ರದಲ್ಲಿ ಸೋಲುವ ಪ್ರಶ್ನೆ ಇರುವುದಿಲ್ಲ. ಅವರನ್ನ ಮತದಾರರಾಗಿ ಪರಿವರ್ತನೆ ಮಾಡಿದರೆ ನಾವು 150ಕ್ಕೂ ಹೆಚ್ಚಿನ ಸ್ಥಾನವನ್ನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.