ಹೊಸ ದಿಗಂತ ವರದಿ,ಶಿರಸಿ :
೨೦೨೧-೨೦೨೨ ನೇ ಸಾಲಿನ ಪಂಪ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಅವರಿಗೆ ಪ್ರದಾನ ಮಾಡಲಾಯಿತು.
ಬನವಾಸಿಯ ಮಯೂರ ವರ್ಮ ವೇದಿಕೆಯಲ್ಲಿ ಆಯೋಜಿಸಲಾದ ಕದಂಬೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಂಪ ಪ್ರಶಸ್ತಿ ಪ್ರದಾನ ಮಾಡಿದರು.
ಕಳೆದ ೩ ವರ್ಷಗಳಿಂದ ಕನೋನಾ ಕಾರಣದಿಂದ ಪಂಪ ಪ್ರಶಸ್ತಿ ಘೋಷಣೆ ಮಾಡಿರಲಿಲ್ಲ. ಈ ಬಾರಿ ಕದಂಬೋತ್ಸವ ಆಯೋಜಿಸಿದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಪಂಪ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ೨೦೨೦-೨೧ ನೇ ಸಾಲಿನ ಪಂಪ ಪ್ರಶಸ್ತಿಯನ್ನು ಸಿ ಪಿ ಕೃಷ್ಣಕುಮಾರ, ೨೦೨೧-೨೨ ನೇ ಸಾಲಿನ ಪ್ರಶಸ್ತಿಯನ್ನು ಡಾ. ಬಾಬು ಕೃಷ್ಣಮೂರ್ತಿ ಅವರಿಗೆ, ೨೦೨೨-೨೩ ನೇ ಸಾಲಿನ ಪ್ರಶಸ್ತಿಯನ್ನು ಡಾ. ಎಸ್ ಆರ್ ರಾಮಸ್ವಾಮಿ ಅವರಿಗೆ ಘೋಷಣೆ ಮಾಡಲಾಗಿತ್ತು.
೨೦೨೧-೨೨ ನೇ ಸಾಲಿನ ಪಂಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಾಬು ಕೃಷ್ಣಮೂರ್ತಿ, ಜನರಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ, ಜಾಗೃತಿ ಮೌಲ್ಯಗಳನ್ನು ವೃದ್ಧಿಸುವ ವಿಷಯನ್ನು ನನ್ನ ಪುಸ್ತಕ ದಲ್ಲಿ ಬರೆದಿದ್ದೇನೆ. ಎಲ್ಲರೂ ಇತಿಹಾಸವನ್ನು ತಿಳಿದುಕೊಳ್ಳುವ ಮನಸ್ಥಿತಿ ಹೊಂದಬೇಕು ಎಂದರು.
ಇಂದು ಪರಂಪರೆ, ಸಂಸ್ಕೃತಿ ಮರೆಯುತ್ತಿದ್ದೇವೆ. ದೇಶ ಒಡೆಯುವವರು ಒಂದು ಕಡೆ ಹೆಚ್ಚಿದ್ದಾರೆ. ಇಂಥ ಸಂದಿಗ್ಧತೆಯ ನಡುವೆ ದೇಶ ಕಟ್ಟುವವರಿಗಾಗಿ ಪುಸ್ತಕ ಬರೆಯುತ್ತಿದ್ದೇನೆ. ದೇಶ ಉಳಿದರೆ ನಾವು, ನಾವಿದ್ದರೆ ದೇಶ ಎಂಬುದನ್ನು ತಿಳಿಯಬೇಕು. ಈ ನಿಟ್ಟಿನಲ್ಲಿ ಮುಂಬರುವ ಸಾಹಿತ್ಯ ಇರಬೇಕು ಎಂದರು.