ಹೊಸ ದಿಗಂತ ವರದಿ,ವಿಜಯಪುರ:
ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ನಕಲಿ ಎನ್ಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಸೇರಿ ಈ ಕೇಸ್ನಲ್ಲಿ ಭಾಗಿಯಾಗಿದ್ದ ಒಟ್ಟು ಏಳು ಮಂದಿ ಮಂಗಳವಾರ ನಗರದ ನ್ಯಾಯಾಲಯಕ್ಕೆ ಹಾಜರಾದರು.
ಆರೋಪಿಗಳಾದ ಮಹಾದೇವ ಸಾಹುಕಾರ ಭೈರಗೊಂಡ, ಪಿಎಸ್ಐ ಗೋಪಾಲ ಹಳ್ಳೂರ ಹಾಗೂ ಶಿವಾನಂದ ಬಿರಾದಾರ ಸೇರಿದಂತೆ 7 ಜನ ಆರೋಪಿಗಳು ಹೆಚ್ಚುವರಿ 1ನೇ ನ್ಯಾಯಾಲಯಕ್ಕೆ ಹಾಜರಾದರು.
ಪ್ರಕರಣದ ವಿವರ: ಅಕ್ಟೋಬರ್ 30, 2017 ರಂದು ಹಂತಕ ಧರ್ಮರಾಜ್ ಚಡಚಣ ನಕಲಿ ಎನ್ಕೌಂಟರ್ ಹಾಗೂ ಸಹೋದರ ಗಂಗಾಧರ ಚಡಚಣ ನಿಗೂಢ ಹತ್ಯೆಯು ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದಲ್ಲಿ ನಡೆದಿತ್ತು. ಹಂತಕ ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಚಡಚಣರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮೃತರ ತಾಯಿ ವಿಮಲಾಬಾಯಿ ಚಡಚಣ ಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಭೈರಗೊಂಡ ಮತ್ತು ಆತನ ಸಹಚರರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಎಡಿಜಿಪಿ ಅಲೋಕ್ಕುಮಾರ್ ಸಂಧಾನ: 40 ದಶಕಗಳಿಂದ ಭೀಮಾತೀರದ ಎರಡು ಕುಟುಂಬಗಳ ಮಧ್ಯೆ ನಡೆಯುತ್ತಿರುವ ಹಗೆತನ ತಾತ್ಕಾಲಿಕವಾಗಿ ಶಮನವಾಗಿದೆ. ಚಡಚಣ ಹಾಗೂ ಭೈರಗೊಂಡ ಕುಟುಂಬಗಳ ಹಗೆತನದಿಂದ ಭೀಮಾತೀರ ರಕ್ತದ ಮಡುವಿನಲ್ಲಿ ತೊಯ್ದಿದೆ. ಹೇಗಾದರೂ ಮಾಡಿ ಈ ಎರಡು ಕುಟುಂಬದ ನಡುವೆ ರಾಜಿ ಸಂಧಾನ ಮಾಡಿಸಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಉತ್ತರ ವಲಯದ ಐಜಿಪಿ ಆಗಿದ್ದಾಗ ಯತ್ನಿಸಿದ್ದರು. ಅಷ್ಟೇ ಅಲ್ಲದೇ, ಎಡಿಜಿಪಿಯಾದ ಮೇಲೂ ಅವರು ಖುದ್ದು ಚಡಚಣಕ್ಕೆ ಆಗಮಿಸಿ ಎರಡು ಕುಟುಂಬಗಳ ನಡುವೆ ಸಂಧಾನ ಮಾಡಿಸಿದ್ದರು. ಈ ಬಳಿಕ ಭೀಮಾತೀರದಲ್ಲಿ ಅಪರಾಧ ಕೃತ್ಯಗಳು ಕಡಿಮೆಯಾಗಿವೆ.