ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಳನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದಿನಿಂದ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಯಾವುದೇ ಪ್ರತಿಭಟನೆಗಳಿಗೆ ಇಳಿಯದೇ, ಮೌನವಾಗಿ ಕರ್ತವ್ಯಕ್ಕೆ ಹಾಜರಾಗದ ಮೂಲಕ ರಾಜ್ಯ ಸರ್ಕಾರಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೌಕರರ ಸಂಘದ ಜತೆ ಸಾಲು ಸಾಲು ಸಭೆ ನಡೆಸಿದ್ದು, ಫಲಶ್ರುತಿ ಇಲ್ಲದಂತಾಗಿದೆ.
ವೇತನ ಆಯೋಗ ಜಾರಿ ಮಾಡಲು ಸ್ವಲ್ಪ ಸಮಯ ಬೇಕು, ಆದರೆ ಶೇ.40ರಷ್ಟು ವೇತನ ಹೆಚ್ಚಳ ಸಾಧ್ಯವಿಲ್ಲ ಶೇ.6 ಅಥವಾ 7ರಷ್ಟು ಮಾತ್ರ ಹೆಚ್ಚು ಮಾಡಲು ಸಾಧ್ಯ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಶೇ.40ರಷ್ಟು ನಿರೀಕ್ಷಿಸುತ್ತಿದ್ದ ಸರ್ಕಾರಿ ನೌಕರರ ಪದಾಧಿಕಾರಿಗಳು ಸುತಾರಾಂ ಒಪ್ಪದೆ ಸಭೆಯಿಂದ ಹೊರನಡೆದಿದ್ದಾರೆ.
ಸಕಾರಾತ್ಮಕವಾಗಿ ಸಭೆ ನಡೆದಿದೆ. ಸದ್ಯ ಹಣಕಾಸು ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ, ಸಮಯ ಕೇಳಿದ್ದೇವೆ, ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ನಮ್ಮ ಬೇಡಿಕೆಗೆ ಸಕಾರಾತ್ಮಕವಾದ ಬೆಂಬಲ ಸಿಕ್ಕಿದೆ. ಆದರೆ ಸಮಯ ಕೇಳಿದ್ದಾರೆ. ಆದೇಶ ಜಾರಿಗೆ ಬರುವವರೆಗೂ ನಮ್ಮ ಮುಷ್ಕರ ನಡೆಯಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಹೇಳಿದ್ದಾರೆ. ಇಂದು ಸರ್ಕಾರಿ ನೌಕಕರು ಮುಷ್ಕರ ಆರಂಭಿಸಿದ್ದು, ಕರ್ತವ್ಯಕ್ಕೆ ಹಾಜರಾಗಿಲ್ಲ.