ಹೊಸದಿಗಂತ ವರದಿ ಮಡಿಕೇರಿ:
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಮಡಿಕೇರಿ ಗಾಂಧಿ ಮೈದಾನ ಹಾಗೂ ನಾಪೋಕ್ಲುವಿಗೆ ಭೇಟಿ ನೀಡಲಿದ್ದು, ನಗರದಲ್ಲಿ ಸಾರ್ವಜನಿಕ ಸುಗಮ ಸಂಚಾರ, ವಾಹನ ನಿಲುಗಡೆಯ ಹಿತದೃಷ್ಟಿಯಿಂದ ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಡಿಕೇರಿ ನಗರದಲ್ಲಿ ವಾಹನ ಸಂಚಾರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ.
ಅದರಂತೆ ಮಡಿಕೇರಿ ನಗರದ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದಿಂದ ಸುದರ್ಶನ ವೃತ್ತದವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಮಡಿಕೇರಿ ನಗರದ ಜಿ.ಟಿ ವೃತ್ತದಿಂದ ಮಂಗಳೂರು ರಸ್ತೆಯ ದೊಡ್ಡ ತಿರುವು (ಎಂಆರ್ಎಫ್ ಟೈರ್ ಶಾಪ್) ವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಮಡಿಕೇರಿ ನಗರದ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದಿಂದ ರಾಜಾಸೀಟ್ ಮಾರ್ಗವಾಗಿ ಸಾಯಿ ಗ್ರೌಂಡ್ ತಿರುವಿನವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಮಡಿಕೇರಿ ನಗರದ ಮೊಣ್ಣಪ್ಪ ಗ್ಯಾರೇಜ್ ಜಂಕ್ಷನ್ನಿಂದ ಪತ್ರಿಕಾ ಭವನ ಜಂಕ್ಷನ್’ವರೆಗಿನ ರಸ್ತೆಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೂ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಸಮಾವೇಶಕ್ಕೆ ಬರುವ ಎಲ್ಲಾ ಕೆಎಸ್ಆರ್ಟಿಸಿ ಬಸ್ಸುಗಳಿಗೆ ಹೊಸ ಖಾಸಗಿ ಬಸ್ಸು ನಿಲ್ದಾಣ ಹಾಗೂ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಆವರಣದಲ್ಲಿ ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ.
ಸಮಾವೇಶಕ್ಕೆ ಬರುವ ಎಲ್ಲಾ ಚತುಷ್ಚಕ್ರ ವಾಹನಗಳಿಗೆ ಎಪಿಎಂಸಿ ಹಾಗೂ ಕೋಟೆ ಆವರಣದಲ್ಲಿ ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ.
ಸಮಾವೇಶಕ್ಕೆ ಬರುವ ಎಲ್ಲಾ ಸರ್ಕಾರಿ ವಾಹನಗಳನ್ನು ಮೂರ್ನಾಡು ರಸ್ತೆಯಲ್ಲಿರುವ ನಿರೀಕ್ಷಣಾ ಮಂದಿರದ ಮುಂದಿನ ಆವರಣದಲ್ಲಿ ಹಾಗೂ ಸಂತ ಮೈಕಲರ ಚರ್ಚ್ ಆವರಣದಲ್ಲಿ ನಿಲುಗಡೆಗೊಳಿಸಬಹುದೆಂದು ಕೊಡಗು ಪೋಲಿಸ್ ಇಲಾಖೆ ತಿಳಿಸಿದೆ.