ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೈವದ ಕಲ್ಲು, ಅದೃಷ್ಟದ ಕಲ್ಲು ಎಂದು ಜನರನ್ನು ನಂಬಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಬಂದಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿಷ್ಣು ರೂಪದ ಕಲ್ಲು ಎಂದು ಹೇಳಿ ರಾಜಧಾನಿಯಲ್ಲಿ ಮಾರಾಟಕ್ಕೆ ಮುಂದಾಗಿದ್ದ ಮಹಾರಾಷ್ಟ್ರ ಮೂಲದ ಮನೋಜ್ ಹಾಗೂ ಆದಿತ್ಯ ಸಾಗರ್ ಎಂಬುವರೇ ಬಂಧಿತರು. ಬಂಧಿತರಿಂದ ಸಾಲಿಗ್ರಾಮದ ಎರಡು ಕಲ್ಲುಗಳು ಹಾಗೂ ಕೆಲ ರಾಸಾಯನಿಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚಕರಿಬ್ಬರು ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ಗೆ ಗಿರಾಕಿಗಳನ್ನು ಬರಮಾಡಿಕೊಂಡು ಮಾರಾಟಕ್ಕೆ ಮುಂದಾಗಿದ್ದರು. ಗುಜರಾತಿನ ಗೋಮತಿ ನದಿಯಿಂದ ತಂದಿರುವ ಬೆಲೆಬಾಳುವ ಸಾಲಿಗ್ರಾಮದ ಎರಡು ಕಲ್ಲುಗಳನ್ನು ತಂದು ಇದು ವಿಷ್ಣುರೂಪದ ಅದೃಷ್ಟಕಲ್ಲು ಎಂದು ನಂಬಿಸಿ ಎರಡು ಕೋಟಿ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಎಸಿಪಿ ಶಿವಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.