ಹೊಸದಿಗಂತ ವರದಿ,ಮಂಡ್ಯ :
ಮದ್ದೂರು ತಾಲೂಕಿನ ನಿಡಘಟ್ಟ ಚೆಕ್ಪೋಸ್ಟ್ ಬಳಿ ಶುಕ್ರವಾರ ಸರಣಿ ಅಪಘಾತ ಸಂಭವಿಸಿ ಮೂರು ಕಾರುಗಳು ಜಖಂಗೊಂಡು ಚಾಲಕರು ಗಾಯಗೊಂಡು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜರುಗಿದೆ.
ಗುಡ್ಪ್ರೈಡೆ, ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಇರುವ ಕಾರಣ ಮೈಸೂರು ಮತ್ತಿತರ ಕಡೆಗಳಿಗೆ ಪ್ರವಾಸಕ್ಕೆ ತೆರಳುವ ಉದ್ದೇಶದಿಂದ ಮುಂಜಾನೆ 6 ಗಂಟೆಯಿಂದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. ತಾಲೂಕಿನ ನಿಡಘಟ್ಟ ಬಳಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ನಿರ್ಮಾಣವಾಗಿದ್ದ ಚೆಕ್ಪೋಸ್ಟ್ ಬಳಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ಬ್ಯಾರಿಕೇಟ್ಗಳನ್ನು ಅಳವಡಿಸಲಾಗಿತ್ತು.
ಬೆಂಗಳೂರಿನಿಂದ ಮೈಸೂರಿಗೆ ಅತಿ ವೇಗವಾಗಿ ತೆರಳುತ್ತಿದ್ದ ಸ್ಕೋಡಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಟ್ಗೆ ಡಿಕ್ಕಿ ಹೊಡೆದಿದೆ. ಸ್ಕೋಡಾ ಕಾರಿನ ಹಿಂದೆ ಬರುತ್ತಿದ್ದ ಮೂರು ಕಾರುಗಳ ಚಾಲಕರುಗಳು ಬ್ರೇಕ್ ಹಾಕಿದ ಕಾರಣ ಸರಣಿ ಅಪಘಾತ ಸಂಭವಿಸಿ ಡಿಕ್ಕಿಯ ರಭಸಕ್ಕೆ 4 ಬ್ಯಾರಿಕೇಟ್ಗಳು ಸಂಪೂರ್ಣವಾಗಿ ಜಖಂಗೊಂಡಿವೆ.
ಬೆಂಗಳೂರು ಮೈಸೂರು ಎಕ್ಸಿಟ್ ರಸ್ತೆಯಲ್ಲಿ ಚೆಕ್ಪೋಸ್ಟ್ ನಿರ್ಮಾಣ ಮಾಡಿದ್ದು, ಕಳೆದ ಭಾನುವಾರ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚೆಕ್ಪೋಸ್ಟ್ಗೆ ಡಿಕ್ಕಿ ಹೊಡೆದ ಪರಿಣಾಮ ಸಿಬ್ಬಂದಿಗಳು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.
ಕಳೆದ ವಾರದಿಂದ ಆರೇಳು ಅಪಘಾತಗಳು ಈ ಸ್ಥಳದಲ್ಲಿ ನಡಿದಿವೆ. ಚುನಾವಣಾ ಕಾರ್ಯ ಮುಗಿಯುವವರೆಗೆ ರಸ್ತೆ ಸುರಕ್ಷತೆ ಬಗ್ಗೆ ಮತ್ತು ವಾಹನಗಳ ವೇಗ ನಿಯಂತ್ರಣಕ್ಕೆ ರಸ್ತೆ ಡುಬ್ಬ ನಿರ್ಮಿಸಿ ಅಪಘಾತ ನಿಯಂತ್ರಣಕ್ಕೆ ತರಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.