ಹೊಸದಿಗಂತ ವರದಿ,ಅಂಕೋಲಾ:
ಬೇಳಾ ಬಂದರಿನ ಹಳ್ಳದ ನೀರಿನಲ್ಲಿ ದೋಣಿ ವಿಹಾರ, ಜಲಕ್ರೀಡೆ, ಓಕುಳಿಯಾಟದೊಂದಿಗೆ ಅಂಕೋಲಾದ ಸುಪ್ರಸಿದ್ಧ ವೆಂಕಟರಮಣ ದೇವರ ತೇರು ಉತ್ಸವ ಮುಕ್ತಾಯಗೊಂಡಿತು.
ಬಂದರು ಪ್ರದೇಶಕ್ಕೆ ಆಗಮಿಸಿದ ಶ್ರೀದೇವರ ಪಲ್ಲಕಿಯನ್ನು ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡು ಪೂಜೆ ಸಲ್ಲಿಸಿದರು.
ಶ್ರೀವೆಂಕಟರಮಣ ದೇವರ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಶೃಂಗರಿಸಿದ ದೋಣಿಯಲ್ಲಿ ಸಾಗಿಸಿ ಜಲಕ್ರೀಡೆಯ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಪೂರೈಸಲಾಯಿತು.
ಬೇಳಾದಿಂದ ದೋಣಿಯಲ್ಲಿ ಹೊರಟ ಜಲವಿಹಾರದ ದೋಣಿ ಯಾತ್ರೆ ಗಾಬೀತ ಕೇಣಿಯ ಸಮುದ್ರ ಸಂಗಮ ಪ್ರದೇಶದ ವರೆಗೆ ತೆರಳಿ ಅಲ್ಲಿ ಮೀನುಗಾರ ಗಾಬೀತ ಸಮಾಜದವರಿಂದ ಪೂಜೆ ಸ್ವೀಕರಿಸಿ
ಬೇಳಾ ಬಂದರ್ ಪ್ರದೇಶಕ್ಕೆ ಬಂದು ಅಲ್ಲಿಂದ ಮೆರವಣಿಗೆ ಮೂಲಕ ವೆಂಕಟರಮಣ ದೇವಾಲಯಕ್ಕೆ ಮರಳುವುದರೊಂದಿಗೆ ಈ ವರ್ಷದ ತೇರು ಉತ್ಸವ ಸಂಪನ್ನಗೊಂಡಿತು.
ದೇವಾಲಯದ ಧರ್ಮದರ್ಶಿಗಳು, ಮೊಕ್ತೆಸರರು, ಆಡಳಿತ ಮಂಡಳಿ ಸದಸ್ಯರು,ಅರ್ಚಕರು, ಬೇಳಾ ಬಂದರ್ ಸುತ್ತ ಮುತ್ತಲಿನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.