ಹೊಸದಿಗಂತ ವರದಿ, ವಿಜಯನಗರ:
ಕ್ಷೇತ್ರ ವ್ಯಾಪ್ತಿಯ ಕಮಲಾಪೂರ ಪಟ್ಟಣದ ಕಾಂಗ್ರೆಸ್ ನ ಅನೇಕ ಮುಖಂಡರು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ನೇತೃತ್ವದಲ್ಲಿ ಗುರುವಾರ ಸೇರ್ಪಡೆಯಾದರು. ನಗರದ ಪಟೇಲ್ ನಗರ ಬಡಾವಣೆಯ ಬಿಜೆಪಿ ಮಂಡಲ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಮಲಾಪೂರ ಪಟ್ಟಣದ ಪ.ಪಂ.ಮಾಜಿ ಅಧ್ಯಕ್ಷ ಡಾ.ಮಾಳಲಿ, ಮಾಜಿ ಉಪಾಧ್ಯಕ್ಷ ಭೀಮಣ್ಣ, ಹೊಸಪೇಟೆ ನಗರಸಭೆ ಮಾಜಿ ಸದಸ್ಯರಾದ ಬೆಲ್ಲದ್ ರೂಫ್, ರಾಮಾಂಜಿನಿ, ಸೇರಿದಂತೆ ಕಾಂಗ್ರೆಸ್ ನ ಅನೇಕ ಮುಖಂಡರು, ಬಿಜೆಪಿ ಅಭಿವೃದ್ಧಿ ನಿರೀಕ್ಷಿಸಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ನಾಯಕತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಎಲ್ಲರಿಗೂ ಸಚಿವರು ಬಿಜೆಪಿ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಸಚಿವ ಆನಂದ್ ಸಿಂಗ್ ಅವರು ಮಾತನಾಡಿ, ಎಲ್ಲರಂತೆ ಸುಳ್ಳು ಹೇಳುವ ಸಂಸ್ಕೃತಿ ನನ್ನದಲ್ಲ, ನುಡಿದಿದ್ದನ್ನೇ ಅಸ್ತಿತ್ವಕ್ಕೆ ತರುವ ಸ್ವಭಾವ ನನ್ನದು, ನನ್ನ ಕ್ಷೇತ್ರದ ಜನರೇ ನನ್ನ ಉಸಿರು, ಕಳೆದ ಅವಧಿಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿರುವೆ, ಅಭಿವೃದ್ಧಿ ಜೊತೆಗೆ ನನ್ನ ಕ್ಷೇತ್ರದ ಜನರ ಸೇವೆ ಮಾಡುವೆ, ನೀಡಿದ ಭರವಸೆಯಂತೆ ನೂತನ ಜಿಲ್ಲೆಯನ್ನು ಅಸ್ತಿತ್ವಕ್ಕೆ ತಂದಿದ್ದು, ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳಾಗಬೇಕಿದೆ, ಕಾಂಗ್ರೆಸ್ ನವರ ಬಣ್ಣದ ಮಾತುಗಳಿಗೆ ಮರುಳಾಗದೇ, ಅವರ ಯಾವುದೇ ಆಮೀಷಗಳಿಗೆ ಒಳಗಾಗದೇ ಪ್ರತಿಯೋಬ್ಬರೂ ಅಭಿವೃದ್ಧಿ ನಿರೀಕ್ಷಿಸಿ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ್ ಸಿಂಗ್ ಅವರನ್ನು ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ