ಹೊಸದಿಗಂತ ವರದಿ, ಮಡಿಕೇರಿ:
ಕೊಡಗಿನ ಮಣ್ಣಿನಲ್ಲಿ ಅಪಾರ ಶಕ್ತಿಯಿದೆ. ಆ ಶಕ್ತಿಯ ಬಲದಿಂದ ಹನುಮನನ್ನು ಮಾನ್ಯ ಮಾಡದವರನ್ನು ಸೋಲಿಸುವ ಮೂಲಕ ನಮ್ಮ ಬಲ ಪ್ರದರ್ಶಿಸುವ ಕಾಲ ಕೂಡಿ ಬಂದಿದೆ. ಅಪ್ಪಚ್ಚು ರಂಜನ್ ಮತ್ತೆ ಗೆಲ್ಲುವುದರೊಂದಿಗೆ ಅದರ ಸಾಕಾರ ಮತ್ತೊಮ್ಮೆ ಆಗಬೇಕಿದೆ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿವೃತ್ತ ಜನರಲ್ ವಿ. ಕೆ. ಸಿಂಗ್ ಕರೆ ನೀಡಿದರು.
ಕುಶಾಲನಗರ ಪಟ್ಟಣದ ಬಸ್ ನಿಲ್ದಾಣದ ಬಳಿ ಏರ್ಪಡಿಸಲಾಗಿದ್ದ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ಅವರ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತಾನಾಡಿದರು.
ಕಾಂಗ್ರೆಸ್’ನಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ಅದು ಯಾವಾಗಲೂ ದೇಶವನ್ನು ತುಚ್ಛ ರೀತಿಯಲ್ಲಿ ಬಿಂಬಿಸುವ ಕೆಲಸವನ್ನೇ ಮಾಡುತ್ತಾ ಬಂದಿದೆ. ಈ ಬಾರಿ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿ, ಅಭಿವೃದ್ಧಿ ಕೆಲಸ-ಕಾರ್ಯಗಳು ಮುಂದುವರೆಯಬೇಕಿದೆ ಎಂದು ಅವರು ಹೇಳಿದರು.
ನನಗೆ ಕೊಡಗಿನ ಬಗ್ಗೆ ಮೊದಲಿನಿಂದಲೂ ಭಾರೀ ಗೌರವವಿದೆ, ಕಾರಣ ಭಾರತೀಯ ಸೇನೆಯ ಮೊತ್ತಮೊದಲ ಮುಖ್ಯಸ್ಥ ಜನರಲ್ ಕಾರಿಯಪ್ಪ ಈ ಮಣ್ಣಿನ ಮಗ ಅದಲ್ಲದೆ ರಜಪೂತ್ ರಿಜಿಮೆಂಟಿನವರು. 23ನೇ ಸೇನಾ ಮುಖ್ಯಸ್ಥನಾಗಿದ್ದ ನಾನು ಕೂಡಾ ರಜಪೂತ್ ರೆಜಿಮೆಂಟಿನವನು. ಇದು ವೀರಪುತ್ರರ ಭೂಮಿ. ಇಲ್ಲಿನ ಅಸಂಖ್ಯಾತ ಸೇನಾನಿಗಳು ಭಾರತೀಯ ಸೇನೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ. ಈ ಬಾರಿ ಅಪ್ಪಚ್ಚು ರಂಜನ್ ಕೂಡಾ ಗೆದ್ದು ಸಚಿವರಾಗಿ ಈ ನೆಲದ ಅಭಿವೃದ್ಧಿಗಾಗಿ ಇನ್ನಷ್ಟು ಕೆಲಸ ಮಾಡಲಿದ್ದಾರೆ. ಆದ್ದರಿಂದ ಅವರನ್ನು ಆರಿಸಿ ಕಳುಹಿಸಿ ಎಂದರು.
ಶಿರಂಗಾಲದಿಂದ ಕುಶಾಲನಗರವರೆಗೆ ಆಯೋಜಿಸಲಾಗಿದ್ದ ಬೃಹತ್ ಬೈಕ್ ರ್ಯಾಲಿಯಲ್ಲಿ ಸಾಗಿ ಬಂದ ಅಪ್ಪಚ್ಚು ರಂಜನ್ ಮತ್ತು ಇತರ ಬಿಜೆಪಿ ನಾಯಕರನ್ನು ವಿ. ಕೆ. ಸಿಂಗ್ ಕುಶಾಲನಗರದಲ್ಲಿ ಕೂಡಿಕೊಂಡರು. ನಾಯಕರನ್ನು ಪುಷ್ಪವೃಷ್ಟಿಯೊಂದಿಗೆ ಬರಮಾಡಿಕೊಳ್ಳಲಾಯಿತು.
ಸಭೆಯನ್ನುದ್ದೇಶಿಸಿ ಅಪ್ಪಚ್ಚು ರಂಜನ್, ಬಿಜೆಪಿ ನಾಯಕರಾದ ಬಿ.ಬಿ.ಭಾರತೀಶ್, ಅನಂತ್ ಕುಮಾರ್ ಮುಂತಾದವರು ಮಾತಾನಾಡಿದರು.