ಹೊಸದಿಗಂತ ವರದಿ, ಹಾವೇರಿ :
ಪಕ್ಷದಲ್ಲಿದ್ದಾಗ ಎಲ್ಲ ಸ್ಥಾನ ಮಾನಗಳನ್ನು ನೀಡಲಾಗಿತ್ತು. ಈಗ ಕಾಂಗ್ರೆಸ್ ಸೇರ್ಪಡೆಯಾದ ಮೇಲೆ ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಯು.ಬಿ.ಬಣಕಾರ ಅವರಿಗೆ ಮೇ.೧೦ ರಂದು ಜರುಗಲಿರುವ ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಬಿ.ಸಿ.ಪಾಟೀಲ ರಾಜ್ಯ ಕೃಷಿ ಸಚಿವರಾಗಿ ಎರಡು ತಾಲೂಕನ್ನು ಅಭಿವೃದ್ಧಿಗೊಳಿಸಿದ್ದಾರೆ ಅಂತಹವರನ್ನು ಪಡೆದ ರಟ್ಟೀಹಳ್ಳಿ ಹಿರೇಕೆರೂರ ಜನತೆ ಧನ್ಯ. ರಾಜ್ಯದಲ್ಲಿ ಕೃಷಿಗೆ ಪೂರಕವಾದ ಅನೇಕ ಯೋಜನೆಗಳನ್ನು ಜಾರಿಗೋಳಿಸುವ ಮೂಲಕ ಅನ್ನ ನೀಡುವ ರೈತರ ಋಣ ತೀರಿಸುವಂತ ಕೆಲಸ ಮಾಡಿದ್ದಾರೆ. ಅಂತ ವ್ಯಕ್ತಿಯನ್ನು ಈ ಬಾರಿ ನಡೆಯವ ಚುನಾವಣೆಯಲ್ಲಿ ೨೫ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ ಎಂದು ವಿನಂತಿಸಿಕೊಂಡರು.
ದೇಶ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ ಸರ್ಕಾರ ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು ಎಂಬ ತತ್ವದಡಿ ಸರ್ಕಾರ ನಡೆಸಿ ಎಲ್ಲ ವರ್ಗದ ಜನ ಮನ್ನಣೆಗೊಂಡಿದೆ. ಕಾರಣ ಮೇ.೧೦.ರಂದು ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ೧೩೦-೧೪೦ ಸ್ಥಾನ ಗೆಲ್ಲುವ ಮೂಲಕ ಮತ್ತೆ ನಮ್ಮದೆ ಸರಕಾರ ಅಧಿಕಾರ ಬರುವುದು ನಿಶ್ಚಿತ ಎಂದು ಹೇಳಿದರು.
ಬಡ ವರ್ಗದ ಜನತೆಯ ಅನಕೂಲಕ್ಕಾಗಿ ಬಿ.ಪಿ.ಎಲ್ ಕುಟುಂಬಕ್ಕೆ ಯುಗಾದಿ, ಗಣೇಶ ಹಬ್ಬ, ದೀಪಾವಳಿಗೆ ವರ್ಷಕ್ಕೆ ೩ ಸಿಲಿಂಡರ್ ಉಚಿತವಾಗಿ ಕೊಡುವ ತಿರ್ಮಾನ ಮಾಡಿದ್ದೇವೆ. ಮಾಸಿಕ ವಿಧವಾ ವೇತನವನ್ನು ೮೦೦ ರಿಂದ ೨ ಸಾವಿರಕ್ಕೆ ಏರಿಕೆ, ಬಿ.ಪಿ.ಎಲ್ ಕುಟುಬಂಕ್ಕೆ ಪ್ರತಿ ನಿತ್ಯ ಅರ್ಧ ಲೀಟರ ನಂದಿನಿ ಹಾಲು, ೫ ಕೆ.ಜಿ ಅಕ್ಕಿ ಜೋತೆ ೫ ಕೆ.ಜಿ ಸಿರಿಧಾನ್ಯ, ರೈತ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೇಕ್ಟರ್ಗೆ ೧೦ ಸಾವಿರ ಪ್ರೋತ್ಸಹಾ ಧನ, ಈ ಬಾರಿ ೫ ಲಕ್ಷದಿಂದ ೧೦ ಲಕ್ಷ ಮನೆ ನಿರ್ಮಾಣದ ಗುರಿ ಇನ್ನು ಅನೇಕ ಯೋಜನೆಗಳನ್ನು ಪ್ರನಾಳಿಕೆಯಲ್ಲಿ ತಿಳಿಸಿದೆ. ಮೇ.೧೦ ರಂದು ಚುನಾವಣೆಯಲ್ಲಿ ಬಿ.ಸಿ.ಪಾಟೀಲರನ್ನು ೨೫ ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿ ಆ ಮೂಲಕ ರಾಜ್ಯದಲ್ಲಿ ೧೩೦-೧೪೦ ಸ್ಥಾನ ಬಿಜೆಪಿ ಗೆದ್ದು ಸರಕಾರ ರಚನೆ ಮಾಡುವುದು ಶತ ಸಿದ್ಧ ಎಂದು ತಿಳಿಸಿದರು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಒಂದು ವರ್ಗದ ಓಲೈಕೆಗಾಗಿ ಯೋಜನೆಗಳನ್ನು ನೀಡಿ ಬಹು ಸಂಖ್ಯಾತರಿಗೆ ಅನ್ಯಾಯ ಮಾಡುವಂತ ಕಾರ್ಯ ಕಾಂಗೆಸ್ನದು ಆದರೆ ಬಿಜೆಪಿ ಸರ್ಕಾರ ಎಲ್ಲ ವರ್ಗದ ಏಳ್ಗೆಗಾಗಿ ೪ ತಿಂಗಳಲ್ಲಿ ರಟ್ಟಿಹಳ್ಳಿ ತಾಲೂಕಿನ ೧೮ ಸಾವಿರ, ಹಿರೇಕೆರೂರ ತಾಲೂಕಿನಲ್ಲಿ ಒಟ್ಟು ೨೯ ಸಾವಿರ ಭಾಗ್ಯ ಲಕ್ಷ್ಮೀ ಬಾಂಡ ಹೊಂದಿದ್ದಾರೆ. ಮುಂಬರುವ ೪ ತಿಂಗಳಲ್ಲಿ ಪ್ರತಿ ಕುಟುಂಬಕ್ಕೆ ೧ ಲಕ್ಷ ಹಣವನ್ನು ಜಮೆ ಮಾಡಲಾಗುವುದು. ಈ ರೀತಿಯಾಗಿ ನಮ್ಮ ಸರ್ಕಾರ ಶಾಶ್ವತವಾದ ನೆರಳನ್ನು ಕೊಡುವಂತ ಕಾರ್ಯ ಮಾಡಿದೆ ಎಂದರು.
ಅಭ್ಯರ್ಥಿ ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು, ಪಾಲಾಕ್ಷಗೌಡ ಪಾಟೀಲ, ಎಸ್.ಎಸ್.ಪಾಟೀಲ, ಲಿಂಗರಾಜ ಚಪ್ಪರದಳ್ಳಿ, ಎನ್.ಎಂ.ಈಟೇರ್, ಅಖೀಲೇಶ್ ಸಿಂಗ್, ಪ್ರಕಾಶಗೌಡ ಪಾಟೀಲ್, ವನಜಾ ಪಾಟೀಲ, ಸೃಷ್ಠಿ ಪಾಟೀಲ, ಆರ್.ಎನ್.ಗಂಗೋಳ, ಶಿವಕುಮಾರ ತಿಪಶೆಟ್ಟಿ, ದೇವರಾಜ ನಾಗಣ್ಣನವರ, ಶಂಕರಗೌಡ ಪಾಟೀಲ, ಮಾಲತೇಶ ಬೆಳಕೆರಿ, ಮನೋಜ ಗೋಣೆಪ್ಪನವರ, ಬಸವರಾಜ ಬೇವಿನಹಳ್ಳಿ, ಆನಂದಪ್ಪ ಹಾದಿಮನಿ ಮುಂತಾದವರು ಇದ್ದರು.