ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಗಾಂಗ ದಾನ ಮಾಡುವ ದಾನಿಗಳ ಗೌರವಾರ್ಥವಾಗಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.
ಈ ಕುರಿತು ಘೋಷಣೆ ಮಾಡಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ತಮ್ಮ ಅಂಗಾಂಗಗಳನ್ನು ದಾನ ಮಾಡಿ ಅನೇಕ ಜೀವಗಳನ್ನು ಉಳಿಸಿದವರ ತ್ಯಾಗವನ್ನು ಗೌರವಿಸಲು ಆ ಅಂಗಾಂಗ ದಾನಿಗಳ ಅಂತ್ಯಕ್ರಿಯೆಯನ್ನು ಇನ್ನುಮುಂದೆ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಅಂಗಾಂಗ ದಾನದ ಮೂಲಕ ನೂರಾರು ರೋಗಿಗಳಿಗೆ ಜೀವ ನೀಡುವಲ್ಲಿ ತಮಿಳುನಾಡು ರಾಜ್ಯ ದೇಶದಲ್ಲೇ ಮುಂಚೂಣಿಯಲ್ಲಿದೆ. ಮೆದುಳು ಡೆಡ್ ಆದ ಕುಟುಂಬದ ಸದಸ್ಯರ ದುರಂತ ಪರಿಸ್ಥಿತಿಯ ನಡುವೆಯೂ ಅವರು ನೀಡುವ ಅಂಗಗಳಿಂದ ಬೇರೆಯವರು ಮರುಜೀವ ಪಡೆಯುತ್ತಿದ್ದಾರೆ. ಹೀಗಾಗಿ, ಆ ದಾನಿಗಳನ್ನು ಗೌರವಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಅಂಗಾಂಗ ದಾನಿಗಳು ಮತ್ತು ಅವರ ಕುಟುಂಬದವರ ತ್ಯಾಗವನ್ನು ಗೌರವಿಸುವ ಸಲುವಾಗಿ ಸರ್ಕಾರವು ಆ ದಾನಿಗಳ ಅಂತ್ಯಕ್ರಿಯೆಗೆ ಸರ್ಕಾರಿ ಗೌರವವನ್ನು ನೀಡಲು ನಿರ್ಧರಿಸಿದೆ ಎಂದಿದ್ದಾರೆ.