ಹೊಸದಿಗಂತ ವರದಿ ಶಿವಮೊಗ್ಗ:
ಹಿಂದು ಸಮಾಜವನ್ನು ಒಡೆದು ಮುಗಿಸುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯ ಅಜೆಂಡಾ ಎಂದು ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಜಗದೀಶ್ ಕಾರಂತ್ ಕಿಡಿ ಕಾರಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ರಾಜ್ಯ ಸರ್ಕಾರಕ್ಕೆ ಗಂಡಸುತನವೇ ಇಲ್ಲ. ಇದು ನೂರಕ್ಕೆ ನೂರು ಪಕ್ಷಪಾತದ ಸರ್ಕಾರ. ಮುಸ್ಲಿಂ ಮೂಲಭೂತ ವಾದಿಗಳಿಗೆ ಈ ಸರ್ಕಾರ ಶರಣಾಗಿದೆ. ಹಾಗಾಗಿಗೇ ಪುಂಡರು, ಕಿಡಿಗೇಡಿಗಳ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ವಾಪಾಸ್ ಪಡೆಯಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಪುಂಡರು ಹಿಂಸಾಚಾರ ನಡೆಸಿದ್ದರು. ಅದೇ ರೀತಿ ಮೈಸೂರು, ಹುಬ್ಬಳ್ಳಿ, ಬೆಂಗಳೂರು, ಹಾಸನ ಸೇರಿದಂತೆ ಅನೇಕ ಕಡೆಗಳಲ್ಲಿ ಹಿಂಸಾಚಾರಕ್ಕೆ ಕಾರಣರಾಗಿದ್ದರು. ಈಗ ಅವರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ಮುಂದಾಗಿದ್ದಾರೆ. ಇದನ್ನು ಹಿಂದೂ ಜಾಗರಣ ವೇದಿಕೆ ಪ್ರಬಲವಾಗಿ ಖಂಡಿಸುವುದಾಗಿ ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಕೇವಲ ವೋಟಿನ ರಾಜಕಾರಣಕ್ಕೆ ಸೀಮಿತವಾಗಿಲ್ಲ. ದೇಶ ವಿಭಜನೆಯ ಇಸ್ಲಾಮಿಕ್ ಶಕ್ತಿಗಳಿಗೆ ಬೆಂಬಲ ನೀಡುತ್ತಿದೆ. ನಿಮಗೆ ನಮ್ಮ ಲೈಸೆನ್ಸ್ ಎಂದು ಪ್ರೋತ್ಸಾಹ ಕೊಡುತ್ತಿದ್ದಾರೆ. ಪುಂಡರ ಮೇಲೆ ನಿಜವಾಗಿ ಕ್ರಮ ಆಗಬೇಕು. ಅದನ್ನು ವಾಪಾಸ್ ಪಡೆಯುವುದು ಅಲ್ಲ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಸಂಪೂರ್ಣ ನಾಶ ಆಗಲಿದೆ ಎಂದು ಎಚ್ಚರಿಕೆ ನೀಡಿದರು.