ಮುಡಿಪು ಭಾರತೀ ಶಾಲೆ: ಎರಡು ವರ್ಷಗಳ ಕಾಲ ನಡೆದ ಅಮೃತ ಮಹೋತ್ಸವ ಹಬ್ಬಕ್ಕೆ ಸಂಭ್ರಮದ ತೆರೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸರಣಿ ಕಾರ್ಯಕ್ರಮಗಳ ಮೂಲಕ ಬರೋಬ್ಬರಿ ಎರಡು ವರ್ಷಗಳ ಕಾಲ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು ಮುಡಿಪು ಭಾರತೀ ಶಾಲೆಯ ‘ಅಮೃತ ಮಹೋತ್ಸವ’ಕ್ಕೆ ಸಂಭ್ರಮದ ತೆರೆಬಿದ್ದಿದೆ.

1948ರಲ್ಲಿ ಸ್ಥಾಪನೆಗೊಂಡ ಈ ಶಾಲೆಯಲ್ಲಿ 2022 ಆ.15ರಿಂದ ಅಮೃತ ಮಹೋತ್ಸವ ಚಟುವಟಿಕೆಗಳು ಪ್ರಾರಂಭಗೊಂಡಿದ್ದವು. 2023 ನ.11,12ರಂದು ಅದ್ಧೂರಿಯಾಗಿ ಅಮೃತ ಮಹೋತ್ಸವ ಆಯೋಜಿಸಲಾಗಿತ್ತು. ಅಮೃತ ಮಹೋತ್ಸವದ ನೆನಪಿಗೆ ಹಲವು ಸೇವಾ ಕಾರ್ಯ ನಡೆಸಲಾಗಿತ್ತಲ್ಲದೆ ಅಮೃತ ಭಾರತೀ ಹೆಸರಿನ ಕಟ್ಟಡ ಕೂಡಾ ಲೋಕಾರ್ಪಣೆ ಮಾಡಲಾಗಿತ್ತು.

ಭಾನುವಾರ (ಆ.25) ಹಮ್ಮಿಕೊಳ್ಳಲಾದ ಸ್ನೇಹ ಮಿಲನ, ಕೃತಜ್ಞತಾಮೃತ, ಅಮೃತ ಭಾರತೀ ಸ್ಮರಣ ಸಂಚಿಕೆ ಲೋಕಾರ್ಪಣೆಯೊಂದಿಗೆ ಈ ಅಕ್ಷರ ದೇಗುಲದ ಎರಡು ವರ್ಷಗಳ ಉತ್ಸವ ಸಂಪನ್ನಗೊಂಡಿದೆ.

1948ರಿಂದ 2016ರ ತನಕ ಈ ಶಾಲೆಯಲ್ಲಿ ಕಲಿತ ಸುಮಾರು 5 ಸಾವಿರಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳ ಹೆಸರು ಸಂಗ್ರಹಿಸಿ ಪ್ರಕಟಿಸಿರುವುದು ಸ್ಮರಣ ಸಂಚಿಕೆಗೆ ಹೊಸ ಕಳೆ ನೀಡಿದೆ.

ಸ್ನೇಹ ಮಿಲನ, ಕೃತಜ್ಞತಾಮೃತ ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವಕ್ಕೆ ಶ್ರಮಿಸಿದ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಬೋಧಕೇತರ ವೃಂದ, ಅಮೃತ ಮಹೋತ್ಸವ ಸಮಿತಿ ಪದಾಧಿಕಾರಿಗಳಲ್ಲದೆ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಕೂಡಾ ಗೌರವಿಸಲಾಯಿತು.


ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್ ಸಂಚಾಲಕ ಕೆ. ಸುಬ್ರಹ್ಮಣ್ಯ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್., ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಸ್ಗರ್, ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಶಕುಂತಲಾ ಶೆಟ್ಟಿ, ಶ್ವೇತಾ ಬಲ್ಲಾಳ್, ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ ಚಂದ್ರಹಾಸ ಕಣಂತೂರು, ಮುದ್ರಕ ನಾಗೇಶ್ ಕಲ್ಲೂರು, ಹಿರಿಯ ವಿದ್ಯಾರ್ಥಿಗಳಾದ ಜಗದೀಶ ಅಡಪ ಕಡ್ವಾಯಿ, ರಾಧಾಕೃಷ್ಣ ರೈ ಉಮಿಯ, ಪ್ರಶಾಂತ ಕಾಜವ, ಅಶ್ರಫ್ ಕುರ್ನಾಡು, ನವೀನ್ ಡಿಸೋಜ, ಪಿ.ನಾರಾಯಣ ಭಟ್, ಹಿರಿಯ ಶಿಕ್ಷಕ ರಾಮ ರಾವ್, ವಿಜಯಲಕ್ಷ್ಮೀ, ಹರೀಶ್, ಪ್ರಮುಖರಾದ ಉದ್ಯಮಿ ರಮೇಶ ಶೇಣವ, ಮೈಸೂರು ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಪ್ರಮುಖರಾದ ಅಬೂಬಕ್ಕರ್ ಹೂಹಾಕುವ ಕಲ್ಲು, ಜಿ. ರಾಮಕೃಷ್ಣ ಭಟ್, ವಿಜಯಕುಮಾರಿ, ಜಯಂತಿ ಶೇಟ್, ಡಾ.ಮಂಜುಳಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಕಾರ್ಯಕ್ರಮದ ಕಳೆ ಹೆಚ್ಚಿಸಿದರು.

‘ಆಟಿದ ನೆಂಪು, ಸೋಣದ ಕಂಪು’ ಹೆಸರಿನಲ್ಲಿ ತುಳುನಾಡಿನ ವಿಶಿಷ್ಟ ತಿನಿಸುಗಳೊಂದಿಗೆ ಸಹ ಭೋಜನ ಆಯೋಜಿಸಲಾಗಿತ್ತು. ತುಳು ವಿದ್ವಾಂಸ ಚಂದ್ರಹಾಸ ಕಣಂತೂರು ತುಳುನಾಡಿನ ಆಚರಣೆಗಳ ಕುರಿತು ಉಪನ್ಯಾಸ ನೀಡಿದರು. ಹಳೆ ವಿದ್ಯಾರ್ಥಿಗಳು, ಅಮೃತ ಮಹೋತ್ಸವ ಸಮಿತಿ ಪ್ರಮುಖರು ಕಾರ್ಯಕ್ರಮಗಳ ಸಿಂಹಾವಲೋಕನ ಮಾಡಿದರು.

ಶಾಲೆಯ ಏಳನೇ ಹಾಗೂ ಹತ್ತನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲೆಯ ನಿವೃತ್ತ ಶಿಕ್ಷಕಿ ಲೀಲಾ ಟೀಚರ್ ಕೊಡಮಾಡಿದ ನಗದು ಪುರಸ್ಕಾರದ ದತ್ತಿನಿಧಿಯ ದಾಖಲೆಗಳನ್ನು ಶಾಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ಹಳೆ ವಿದ್ಯಾರ್ಥಿಗಳ ಸಂಘಕ್ಕೆ ನೂತನ ಸಾರಥಿಗಳು!
ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ನಡೆದಿದ್ದು, ಮುಂದಿನ ಅವಧಿಗೆ ಅಧ್ಯಕ್ಷರಾಗಿ ನಿಶ್ಚಲ್ ಡಿ.ಶೆಟ್ಟಿ ಮೂರನೇ ಅವಧಿಗೆ ಪುನರಾಯ್ಕೆಯಾದರು. ಗೌರವಾಧ್ಯಕ್ಷರಾಗಿ ಜಗದೀಶ್ ಅಡಪ ಕಡ್ವಾಯಿ, ಉಪಾಧ್ಯಕ್ಷರಾಗಿ ನರಸಿಂಹ ಭಟ್ ಎನ್., ರಶ್ಮಿ ಅಮ್ಮೆಂಬಳ, ಮಜೀದ್ ಮದ್ದನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಭಟ್, ಜೊತೆ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮೀ, ಕೋಶಾಧಿಕಾರಿಯಾಗಿ ಮನು ವೆಂಕಟೇಶ್, ಗೌರವ ಸಲಹೆಗಾರರಾಗಿ ಉಮೇಶ್ ಕೆ.ಆರ್. ಹಾಗೂ ಸುಬ್ರಹ್ಮಣ್ಯ ಭಟ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಮಹಮ್ಮದ್ ಅಸ್ಗರ್ ಮತ್ತಿತರರು ಆಯ್ಕೆಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!