ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಬಜೆಟ್ ಸಿದ್ಧತೆ ಹಾಗೂ ರಾಜ್ಯಪಾಲರ ಭಾಷಣದ ಕುರಿತಾದ ಸಾಂವಿಧಾನಿಕ ಚರ್ಚೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದ ಮುಂದಿನ ಆಯವ್ಯಯ ಸಿದ್ಧತೆಗಳು ಈಗಾಗಲೇ ಚುರುಕುಗೊಂಡಿದ್ದು, ಫೆಬ್ರವರಿ 2 ರಿಂದ ಅಧಿಕೃತವಾಗಿ ಬಜೆಟ್ ಸಭೆಗಳು ಆರಂಭವಾಗಲಿವೆ. ಪ್ರಸ್ತುತ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆಯುತ್ತಿವೆ ಎಂದು ಸಿಎಂ ತಿಳಿಸಿದರು.
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡುವ ಭಾಷಣದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಸಂವಿಧಾನದ 163 ಮತ್ತು 176ನೇ ವಿಧಿಗಳನ್ನು ನೆನಪಿಸಿದರು. “ಸರ್ಕಾರ ಏನು ಬರೆದುಕೊಡುತ್ತದೆಯೋ ಅದನ್ನು ಓದುವುದು ರಾಜ್ಯಪಾಲರ ಸಾಂವಿಧಾನಿಕ ಕರ್ತವ್ಯ. ನಾಳೆ ನಾವು ಭಾಷಣದ ಪ್ರತಿಯನ್ನು ಸಿದ್ಧಪಡಿಸಿ ನೀಡಲಿದ್ದೇವೆ. ಅದನ್ನು ಬದಲಾಯಿಸುವುದು ಅಥವಾ ಹಾಗೆಯೇ ಓದುವುದು ಅವರಿಗೆ ಬಿಟ್ಟ ವಿಚಾರ,” ಎಂದು ಅವರು ಮಾರ್ಮಿಕವಾಗಿ ನುಡಿದರು.
ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆಯೂ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುವ ಭರವಸೆ ನೀಡಿದರು.



