ಹೊಸದಿಗಂತ ವರದಿ, ಮುಂಡಗೋಡ:
ಬೆಂಗಳೂರಿನ ಕೆಜಿ ಹಳ್ಳಿ-ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಮೌಸೀನ್ ಅಲಿಯಾಸ್ ಇಮ್ಮಿಯಾಝ್ ಶುಕುರ್ನನ್ನು ಉತ್ತರ ಕನ್ನಡ ಜಿಲ್ಲೆ ಪೊಲೀಸರು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ವಶಕ್ಕೆ ಪಡೆದು ಮುಂಡಗೋಡದ ಹೊರವಲಯದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿ ಭಾನುವಾರ ಬೆಳಿಗ್ಗೆ ಮುಂಡಗೋಡದ ಹೊರವಲಯದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿಯ ನಿವಾಸಿ ಮೌಸೀನ್ (ಇಮಿಯಾಝ್ ಶುಕುರ್) ಪಿಎಫ್ಐ ಕಾರ್ಯಕರ್ತನಾಗಿದ್ದ. ಅಲ್ಲದೇ ಈತ ಉಗ್ರರಿಂದ ತರಬೇತಿ ಪಡೆದಿದ್ದ ಎನ್ನಲಾಗುತ್ತಿದೆ. ಕೆಜಿ ಹಳ್ಳಿ-ಡಿಜಿ ಹಳ್ಳಿ ಗಲಭೆ ನಂತರ ತಲೆಮರೆಸಿಕೊಂಡು ಹೈದರಾಬಾದ್ ಗೆ ತೆರಳಿದ್ದ ಈತ, ಬಳಿಕ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನೆಲೆಸಿದ್ದನು ಎಂದು ತಿಳಿದುಬಂದಿದೆ. ೨೦೨೦ರಲ್ಲಿ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಗಲಭೆ ನಡೆದಿತ್ತು ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಈ ಹಿಂದೆ ಉಗ್ರ ಚಟುವಟಿಕೆ ಸಂಬಂಧ ಶಿರಸಿಯಲ್ಲಿ ಎನ್ ಐಎನಿಂದ ಬಂಧಿತನಾಗಿದ್ದ ಸಾದಿಕ್ ಎಂಬಾತ ಮೌಸೀನ್ಗೆ ತರಬೇತಿ ನೀಡಿದ್ದ ಎನ್ನಲಾಗುತ್ತಿದೆ. ಮೌಸೀನ್ ವಿರುದ್ದ ಶಿರಸಿಯಲ್ಲೂ ಕೆಲ ಪ್ರಕರಣಗಳು ದಾಖಲಾಗಿದೆ ಎಂದು
ಹೇಳಲಾಗಿದೆ. ಶಿರಸಿ ಡಿವೈಎಸ್ಪಿ ಗಣೇಶ ಕೆ ಎಲ್ ಅವರ ನೇತೃತ್ವದ ತಂಡ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಬಲಮೂಲಗಳಿಂದ ತಿಳಿದುಬಂದಿದೆ.