ಹೊಸದಿಗಂತ ವರದಿ, ಹಾಸನ :
ಜಮೀನು ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಆಲೂರು ತಾಲ್ಲೂಕಿನ ಉಮಾದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಣಗಾಲ್ ಗ್ರಾಮದ ಪ್ರತಾಪ್ (40)ಮೃತ ವ್ಯಕ್ತಿ.
ಇವರು ಹಾಸನದಲ್ಲಿ ವಾಸವಿದ್ದು, ಸುಮಾರು 30 ವರ್ಷಗಳ ಹಿಂದೆ ಪಿಎಲ್ಡಿ ಬ್ಯಾಂಕ್ ಹರಾಜಿನಲ್ಲಿ ಉಮಾದೇವರಹಳ್ಳಿ ಗ್ರಾಮದ ಸ. ನಂ 179 ಜಮೀನು ಪಡೆದು ತಾಯಿ ಚನ್ನಮ್ಮ ಹೆಸರಿಗೆ ಮಾಡಿಸಿ ಸಾಗುವಳಿ ಮಾಡುತ್ತಿದ್ದರು. ಆದರೆ ಇತ್ತೀಚಿಗೆ ತೊರಳ್ಳಿ ಗ್ರಾಮದ ಈರಯ್ಯನ ಮಕ್ಕಳಾದ ಚಂದ್ರಶೇಖರ್,ಮೋಹನ್ ಎಂಬುವವರು ಈ ಜಮೀನು ನಮ್ಮ ಹೆಸರಿಗಾಗಿದೆ ಎಂದು ತಗಾದೆ ತಗೆದು ಶನಿವಾರ ಟ್ರಾಕ್ಟರ್ ನಲ್ಲಿ ಉಳಿಮೆ ಮಾಡಿಸಲು ಹೋಗಿದ್ದಾರೆ. ವಿಷಯ ತಿಳಿದು ಪ್ರತಾಪ್, ತಾಯಿ ಚನ್ನಮ್ಮ ಹಾಗೂ ಚಿಕ್ಕಪ್ಪನ ಮಗ ಬಸವರಾಜ್ ಜಮೀನು ಬಳಿ ತೆರಳಿ ಉಳುಮೆ ಮಾಡುತ್ತಿದ್ದ ಟ್ರಾಕ್ಟರ್ ನ್ನು ತಡೆದಿದ್ದಾರೆ. ಆ ಸಂದರ್ಭದಲ್ಲಿ ಎರಡು ಗುಂಪುಗಳ ಮಾತಿಗೆ ಮಾತು ಬೆಳೆದು ಚಂದ್ರಶೇಖರ್, ಮೋಹನ್, ಹಾಗೂ ಟ್ರಾಕ್ಟರ್ ಚಾಲಕ ಪ್ರತಾಪ್ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರತಾಪ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ತಗೆದುಕೊಂಡು ಹೋಗಿದ್ದಾರೆ ಅದರೆ ಹೋಗುವಷ್ಟರಲ್ಲಿ ದಾರಿ ಮದ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಮೃತ ಪ್ರತಾಪ್ ಸಹೋದರ ಸುರೇಶ್ ಆಲೂರು ಠಾಣೆಗೆ ದೂರು ನೀಡಿದ್ದಾರೆ.
ದೂರಿನನ್ವಯ ಆಲೂರು ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಚಂದ್ರಶೇಖರ್ ಹಾಗೂ ಮೋಹನ್ ಅವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸಬ್ ಇನ್ಸ್ಪೆಕ್ಟರ್ ಜನಬಾಯಿ ಕಡಪಟ್ಟಿ ತಿಳಿಸಿದ್ದಾರೆ.