ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಹಗರಣದ ನೈತಿಕ ಹೊಣೆ ಹೊತ್ತು ಸಚಿವ ತಿಮ್ಮಾಪುರ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರವು ಅಬಕಾರಿ ಇಲಾಖೆಗೆ ದುಬಾರಿ ಗುರಿ ನೀಡಿದೆ. ಇದರಿಂದಾಗಿ ಪ್ರತಿ 500 ಮೀಟರ್ಗೆ ಒಂದು ಮದ್ಯದಂಗಡಿ ತೆರೆಯುವಂತಾಗಿದ್ದು, ಕರ್ನಾಟಕವನ್ನು ‘ಕುಡುಕರ ರಾಜ್ಯ’ವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಅಬಕಾರಿ ಇಲಾಖೆಯಲ್ಲಿ ಸುಮಾರು 6,000 ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ಇಲಾಖೆಯ ಸಂಘಟನೆಯ ಅಧ್ಯಕ್ಷರೇ ಬಹಿರಂಗಪಡಿಸಿದ್ದಾರೆ. ಅಲ್ಲದೆ, ವರ್ಗಾವಣೆ ಮತ್ತು ಲೈಸೆನ್ಸ್ ನೀಡುವಲ್ಲಿ ಸಚಿವರು ಮತ್ತು ಅವರ ಕುಟುಂಬಸ್ಥರ ಹಸ್ತಕ್ಷೇಪವಿದೆ ಎಂಬ ಆಡಿಯೋ ಟೇಪ್ಗಳು ಸರ್ಕಾರದ ಮಾನ ಹರಾಜು ಹಾಕಿವೆ ಎಂದು ಅವರು ಟೀಕಿಸಿದರು.
ಇದನ್ನೂ ಓದಿ:
ಹಿಂದೆ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ಪಡೆದಿದ್ದ ಘಟನೆಯನ್ನು ನೆನಪಿಸಿದ ವಿಜಯೇಂದ್ರ, “ಮುಖ್ಯಮಂತ್ರಿಗಳು ಈಗ ಸಚಿವರ ರಾಜೀನಾಮೆ ಪಡೆದು ನಂತರ ನಿಷ್ಪಕ್ಷಪಾತ ತನಿಖೆ ನಡೆಸಲಿ” ಎಂದು ಸವಾಲು ಹಾಕಿದರು.



