ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ನ ಹಿರಿಯ ನಾಯಕ ಜಿ.ಟಿ. ದೇವೇಗೌಡ ಮತ್ತು ಪಕ್ಷದ ನಾಯಕತ್ವದ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ಮೈಸೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಜಿ.ಟಿ. ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದು, “ಅವರು ಇನ್ಮುಂದೆ ನಮ್ಮ ಜೊತೆ ಇಲ್ಲ” ಎಂದು ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
“ಪಕ್ಷದ ಬಗ್ಗೆ ನಿಯತ್ತು ಮತ್ತು ನಿಷ್ಠೆ ಇಲ್ಲದವರನ್ನು ನಾವು ಜೊತೆಯಲ್ಲಿಟ್ಟುಕೊಳ್ಳಬೇಕಾ?” ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಜಿಟಿಡಿ ಈಗ ಬೇರೆ ‘ಮಹಾನ್ ನಾಯಕರ’ ಕೈಗೊಂಬೆಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು. “ನನ್ನ ಮುಂದೆ ಅವರ ಹೆಸರನ್ನು ಪ್ರಸ್ತಾಪ ಮಾಡಬೇಡಿ. ನನ್ನ ಮನಸ್ಸಿಗೆ ಬಹಳ ನೋವುಂಟು ಮಾಡುವ ಕೆಲಸ ಅವರು ಮಾಡಿದ್ದಾರೆ,” ಎನ್ನುತ್ತಾ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಚಾಮುಂಡೇಶ್ವರಿ ಕ್ಷೇತ್ರದೊಂದಿಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗೂ ಬೆಲೆ ಕಟ್ಟಲಾಗದ ಸಂಬಂಧವಿದೆ. ಅಲ್ಲಿ ಜೆಡಿಎಸ್ನಿಂದ ಯಾರನ್ನೇ ಅಭ್ಯರ್ಥಿ ಮಾಡಿದರೂ ಜನರು ಗೆಲ್ಲಿಸುತ್ತಾರೆ.
ಇದನ್ನೂ ಓದಿ:
ಬಹಳ ಜನರನ್ನು ಬೆಳೆಸಿದ್ದೇವೆ ಎನ್ನುವವರು ಈಗ ಯಾರನ್ನೋ ಮೆರೆಸಲು ಹೊರಟಿದ್ದಾರೆ. ಅವರಿಗೆ ಕೃತಜ್ಞತೆ ಎಂಬುದು ಇಲ್ಲ ಎಂದು ಜಿಟಿಡಿ ವಿರುದ್ಧ ಕಿಡಿಕಾರಿದರು.



