May 26, 2026
Tuesday, May 26, 2026
spot_img

ಕಾಂಗ್ರೆಸ್‌ ಅಭ್ಯರ್ಥಿ ಸೂರ್ಯಪ್ರಕಾಶ್‌ ಪರ ಲಕ್ಷ್ಮೀ ಹೆಬ್ಬಾಳ್ಕರ್‌ ಅದ್ಧೂರಿ ಪ್ರಚಾರ

ಹೊಸದಿಗಂತ ವರದಿ ಬೆಳಗಾವಿ :

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಾವುಂಡ ಪಾಳ್ಯಂ ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಾಂಗ್ರೆಸ್‌ ಅಭ್ಯರ್ಥಿ ಸೂರ್ಯಪ್ರಕಾಶ್‌ ಪರ ಪ್ರಚಾರ ನಡೆಸಿದರು.

ತೆಲಂಗಾಣದ ಜಲ ಸಂಪನ್ಮೂಲ ಸಚಿವರಾದ ಉತ್ತಮ್‌ಕುಮಾರ್‌ ರೆಡ್ಡಿ ಜೊತೆಗೂಡಿ, ಕಾವುಂಡ ಪಾಳ್ಯಂ ಕ್ಷೇತ್ರದ ಜಲ್ಲಿಕೊರೈ, ಸುಬ್ರಹ್ಮಣ್ಯ ಪಾಳ್ಯಂ, ವಾಲೆಟ್‌ ನಗರ, ಕೆಎನ್‌ಜಿ ಪುದುರ್‌ ಪ್ರದೇಶಗಳಲ್ಲಿ ಮತಯಾಚಿಸಿದರು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಾರಥ್ಯದ ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆ ಮತದಾರರಿಗೆ ಸವಿಸ್ತಾರವಾಗಿ ವಿವರಿಸಿದರು. ಪಂಚ ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದ್ದು, ಬದ್ಧತೆಗೆ ಮತ್ತೊಂದು ಹೆಸರೇ ಕಾಂಗ್ರೆಸ್‌ ಪಕ್ಷ. ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟದ ಅಂಗ ಪಕ್ಷವಾಗಿರುವ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದರು.

ಸಚಿವರಿಂದ ಸರಣಿ ಸಭೆ :

ತೆಲಂಗಾಣದ ಜಲಸಂಪನ್ಮೂಲ ಸಚಿವರಾದ ಉತ್ತಮ್‌ಕುಮಾರ್‌ ರೆಡ್ಡಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್‌ ಮುಖಂಡರೊಂದಿಗೆ ಸಚಿವರು ಸರಣಿ ಸಭೆ ನಡೆಸಿದರು. ಚುನಾವಣೆಯ ರೂಪುರೇಷೆ ಒಳಗೊಂಡಂತೆ ಪಕ್ಷದ ಕಾರ್ಯಚಟುವಟಿಕೆಗಳ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಚರ್ಚೆ ನಡೆಸಿದರು. ಕಳೆದ ಎರಡು ದಿನಗಳಿಂದ ಸುಮಾರು 10 ಕ್ಕೂ ಹೆಚ್ಚು ಪ್ರದೇಶಗಳಿಗೆ ಭೇಟಿ ಕೊಟ್ಟಿರುವ ಸಚಿವರು, ಸ್ಥಳೀಯ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದರು.

ಈ ವೇಳೆ ತೆಲಂಗಾಣದ ಸಚಿವರಾದ ಉತ್ತಮ್‌ಕುಮಾರ್‌ ರೆಡ್ಡಿ, ಮುಖಂಡರಾದ ಮುಳನೂರು ಕಾರ್ತಿ, ಡಿಎಂಟಿ ನಾಯಕ ರಾಜಶೇಖರನ್‌, ಚಂದ್ರಶೇಖರನ್‌, ಕೌನ್ಸಿಲರ್‌ ಶಾಂತಾ ಮಣಿ, ಎಸ್.ಎ.ಖಾದರ್‌ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !