ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಖ್ಯಾತ ಹಾಸ್ಯ ನಟ ರಾಜ್ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. 9 ಕೋಟಿ ರೂಪಾಯಿ ಸಾಲದ ಸುಳಿ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿ ತಿಹಾರ್ ಜೈಲು ಪಾಲಾಗಿದ್ದ ನಟನಿಗೆ, ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಲು ನ್ಯಾಯಾಲಯ ತಾತ್ಕಾಲಿಕ ರಿಲೀಫ್ ನೀಡಿದೆ.
ಇಂದು ಮಧ್ಯಾಹ್ನ 3 ಗಂಟೆಯೊಳಗೆ 1.3 ಕೋಟಿ ರೂಪಾಯಿ ಪಾವತಿಸುವಂತೆ ಕೋರ್ಟ್ ಸೂಚಿಸಿತ್ತು. ಹಣ ಹೊಂದಿಸಿದ ಬಳಿಕವಷ್ಟೇ ಜಾಮೀನು ಪ್ರಕ್ರಿಯೆ ಪೂರ್ಣಗೊಂಡಿದೆ.
ರಾಜ್ಪಾಲ್ ಯಾದವ್ ಅವರು ಮಾರ್ಚ್ 18 ರವರೆಗೆ ಜೈಲಿನಿಂದ ಹೊರಗಿರಲಿದ್ದಾರೆ. ಅಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.
ಸಿನಿಮಾ ನಿರ್ಮಾಣಕ್ಕಾಗಿ ಪಡೆದ ಸಾಲ ತೀರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನಟ, ಹಲವು ಬಾರಿ ಚೆಕ್ ಬೌನ್ಸ್ ಪ್ರಕರಣಗಳನ್ನು ಎದುರಿಸುತ್ತಿದ್ದರು. ಪದೇ ಪದೇ ಕಾಲಾವಕಾಶ ನೀಡಿದರೂ ಹಣ ಮರಳಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ನ್ಯಾಯಾಲಯ ಅವರಿಗೆ ಜೈಲು ಶಿಕ್ಷೆ ವಿಧಿಸಿತ್ತು.
ನಟ ಸೋನು ಸೂದ್ ಸೇರಿದಂತೆ ಚಿತ್ರರಂಗದ ಹಲವರು ಸಂಕಷ್ಟದ ಸಮಯದಲ್ಲಿ ರಾಜ್ಪಾಲ್ ಪರವಾಗಿ ನಿಂತಿದ್ದಾರೆ. ‘ಭೂಲ್ ಭುಲಯ್ಯ’ ಚಿತ್ರದ ಮೂಲಕ ಪ್ರೇಕ್ಷಕರನ್ನು ನಗಿಸಿದ್ದ ನಟ, ನಿಜ ಜೀವನದಲ್ಲಿ ಮಾತ್ರ ಸಾಲದ ಹೊರೆಯಿಂದ ಕಣ್ಣೀರು ಹಾಕುವಂತಾಗಿದೆ.



