ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ ರಾಜ್ಯ ಸರ್ಕಾರ ವಿರುದ್ಧ ಖಾಲಿ ಟ್ರಂಕ್ ಹಿಡಿದು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಇದೀಗ ಪೊಲೀಸರಿಂದ ಖಾಸಗಿ ದೂರು ದಾಖಲಾಗಿದ್ದು, ಈ ಸಂಬಂಧ ತೇಜಸ್ವಿ ಸೂರ್ಯ ಸೇರಿ ಒಂಭತ್ತು ಜನರಿಗೆ 42ನೇ ಎಸಿಜೆಎಂ ಕೋರ್ಟ್ನಿಂದ ನೊಟೀಸ್ ಜಾರಿ ಮಾಡಲಾಗಿದೆ.
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಜಯನಗರ ಠಾಣೆ ಇನ್ಸ್ಪೆಕ್ಟರ್ ಆರ್.ದೀಪಕ್ರಿಂದ ಖಾಸಗಿ ದೂರು ನೀಡಲಾಗಿದೆ. ಖಾಸಗಿ ದೂರು ಸಂಬಂಧ ಸಂಸದ ತೇಜಸ್ವಿ ಸೂರ್ಯ, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಸೇರಿ 9 ಜನರಿಗೆ 42ನೇ ಎಸಿಜೆಎಂ ಕೋರ್ಟ್ನಿಂದ ನೊಟೀಸ್ ನೀಡಲಾಗಿದೆ.
ಬೆಂಗಳೂರಿನ ಆರ್.ವಿ ರೋಡ್ ಮೆಟ್ರೋ ಸ್ಟೇಷನ್ ಬಳಿ ಸೂರ್ಯ ಖಾಲಿ ಟ್ರಂಕ್ ಪ್ರದರ್ಶಿಸಿದ್ದರು. ರಾಜ್ಯ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಹೀಗಾಗಿ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಲು ರಾಜ್ಯ ಸರ್ಕಾರವೇ ದರ ಏರಿಕೆ ಸಮಿತಿಗೆ ಒತ್ತಾಯಿಸಿದೆ ಅಂತಾ ಕಿಡಿಕಾರಿದ್ದರು.
ಈ ವೇಳೆ ಪೊಲೀಸರು ನೊಟೀಸ್ ನೀಡಿದ್ದಕ್ಕೆ ಕಿಡಿಕಾರಿದ್ದ ತೇಜಸ್ವಿ ಸೂರ್ಯ, ನಾನು ಪ್ರತಿಭಟನೆ ಮಾಡಿಲ್ಲ. ಖಾಲಿ ಟ್ರಂಕ್ ಹಿಡಿದುಕೊಂಡು ಮೆಟ್ರೋದಲ್ಲಿ ಹೋಗುತ್ತಿದ್ದೆಎಂದು ಟೀಕಿಸಿದ್ದರು. ಬಳಿಕ ತೇಜಸ್ವಿ ಸೂರ್ಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.



