ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಕಾಸಗಂಜ್ ಜಿಲ್ಲೆಯ ಅಮಾಪುರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರು ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸಂಚಲನ ಮೂಡಿಸಿದೆ.
ಮೃತರನ್ನು ಸತ್ಯವೀರ್ ಅಲಿಯಾಸ್ ಶ್ಯಾಮವೀರ್ (50), ಪತ್ನಿ ರಾಮಶ್ರೀ (48), ಪುತ್ರಿಯರಾದ ಪ್ರಾಚಿ (12), ಅಮರವತಿ (10) ಮತ್ತು ಪುತ್ರ ಗಿರೀಶ್ (9) ಎಂದು ಗುರುತಿಸಲಾಗಿದೆ.
2–3 ದಿನಗಳಿಂದ ಮನೆ ಬಾಗಿಲು ತೆರೆದಿಲ್ಲ ಎಂಬ ಮಾಹಿತಿ ಪೊಲೀಸರಿಗೆ ತಲುಪಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಅಧಿಕಾರಿಗಳು, ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದರು. ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಸತ್ಯವೀರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತ್ನಿ ಮತ್ತು ಮೂವರು ಮಕ್ಕಳು ಹಾಸಿಗೆಯ ಮೇಲೆ ಮೃತರಾಗಿದ್ದರು.
ಇದನ್ನೂ ಓದಿ:
ಪ್ರಾಥಮಿಕ ತನಿಖೆ ಪ್ರಕಾರ ಕುಟುಂಬದವರನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಫಾರೆನ್ಸಿಕ್ ತಂಡ ಮತ್ತು ಶ್ವಾನ ದಳ ಸ್ಥಳ ಪರಿಶೀಲನೆ ನಡೆಸಿದೆ. ಆರ್ಥಿಕ ಸಂಕಷ್ಟ ಕಾರಣವಾಗಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.
ಪಂಚನಾಮೆ ಬಳಿಕ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.



