ಹೊಸದಿಗಂತ ವರದಿ ಬೀದರ್
ಬೀದರ್: ನಗರದ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿಸ್ತೂಲ್, ಮದ್ದುಗುಂಡುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಪ್ರದೀಪ್ ಗುಂಟಿ, ಐದು ನಾಡ ಪಿಸ್ತೂಲ್, 5 ತಲ್ವಾರ್ ಸೇರಿದಂತೆ 6.73 ಲಕ್ಷ ರೂ. ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಒಂದು ದ್ವಿಚಕ್ರ ವಾಹನವನ್ನು ಬುಧವಾರ ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಅಮನಜಿತ್ ಹಾಗೂ ವೆಂಕಟೇಶ್ ಬಂಧಿತ ಆರೋಪಿಗಳು. ಇವರು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಿಂದ ಶಸ್ತ್ರಾಸ್ತ್ರ ಖರೀದಿಸಿ ಮಾರಾಟ ಮಾಡುವ ಉದ್ದೇಶದಿಂದ ನಗರದ ಹೊರವಲಯದಲ್ಲಿ ನಿಂತಿದ್ದರು. ಮಾದಕ ವಸ್ತು ತಡೆಗಟ್ಟುವ ಪೊಲೀಸರ ತಂಡ ಅವರನ್ನು ಬಂಧಿಸಿದೆ ಎಂದರು.
ಆರೋಪಿಗಳಹತ್ತಿರ ಇರುವ 3 ಬ್ಯಾಗ್ ಗಳಲ್ಲಿ ಶಸ್ತ್ರಾಸ್ತ್ರಗಳು ಖರೀದಿಸಿ ತಂದಿದ್ದರು. ಅದರಲ್ಲಿ 3.50 ಲಕ್ಷ ರೂ. ಮೌಲ್ಯದ 5 ನಾಡ ಪಿಸ್ತೂಲ್, ಹಾಗೂ 2.60 ಲಕ್ಷ ರೂ. ಮೌಲ್ಯದ ಒಟ್ಟು 26 ಜೀವಂತ ಮದ್ದು ಗುಂಡುಗಳು ಮತ್ತು 10 ಖಾಲಿ ಮದ್ದು ಗುಂಡುಗಳು ಹಸೇರಿದಂತೆ 13 ಸಾವಿರ ರೂ. ಮೌಲ್ಯದ 5 ತಲವಾರುಗಳಿದ್ದವು. ಎಲ್ಲವನ್ನು ವಶಕ್ಕೆ ಪಡೆದು ಅವರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ:
ಆರೋಪಿಗಳು ನಗರದಲ್ಲಿ ಸಣ್ಣ ಹೋಟೆಲ್ ಉದ್ಯಮ ಮಾಡಿಕೊಂಡಿದ್ದಾರೆ. ಇದಕ್ಕಿಂತ ಮೊದಲು ಒಬ್ಬನ ಮೇಲೆ 307ನೇ ಅಡಿಯಲ್ಲಿ ಪ್ರಕರಣ ದಾಖಲಾಗಿದೆ, ಇನ್ನುಳಿದಂತೆ ಅವರ ಮೇಲೆ ಯಾವುದೇ ರೀತಿಯ ಪ್ರಕರಣಗಳಿಲ್ಲ. ಆರೋಪಿಗಳು ಇದೀಗ ಮಹಾರಾಷ್ಟ್ರದಿಂದ ಶಸ್ತ್ರಾಸ್ತ್ರ ಖರೀದಿಸಿ ನಗರದಲ್ಲಿ ಮಾರಾಟ ಮಾಡಲು ಯೋಚಿಸಿದ್ದರು. ಅವುಗಳನ್ನು ಯಾರಿಗೆ ಮಾರಾಟ ಮಾಡಲು ಮುಂದಾಗಿದ್ದರು ಎಂಬುದನ್ನು ಪತ್ತೆ ಹಚ್ಚಿ ಅವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪ್ರದಿಪ ಗುಂಟೆಎಸ್ಪಿ ತಿಳಿಸಿದರು.



