ಹೊಸದಿಗಂತ ವರದಿ ಬೆಳಗಾವಿ:
ಹಿಂದು ಧರ್ಮದ ಸಾರವೇ ಮಾನವೀಯತೆ. ನಮ್ಮ ಧರ್ಮವನ್ನು ಅನುಸರಿಸುವುದರ ಜೊತೆಗೆ ಇತರ ಧರ್ಮಗಳನ್ನೂ ಗೌರವಿಸುವುದು ನಮ್ಮ ಸಂಸ್ಕೃತಿ. ಕೇವಲ ದ್ವೇಷದಿಂದ ದೇವರು ಮೆಚ್ಚುವುದಿಲ್ಲ; ಮನುಷ್ಯತ್ವ ಬೆಳೆಸಿಕೊಂಡಾಗಲೇ ಸಮಾಜ ಸುಂದರವಾಗುತ್ತದೆ, ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬಸ್ತವಾಡ ಗ್ರಾಮದಲ್ಲಿ 2.80 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಹಾಗೂ 1.18 ಕೋಟಿ ರೂ. ವೆಚ್ಚದಲ್ಲಿ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಗ್ರಾಮದ ಎಲ್ಲ ಜಾತಿಯವರೂ ಒಂದಾಗಿ ಉತ್ತಮ ಕಾರ್ಯಗಳಲ್ಲಿ ಭಾಗವಹಿಸುತ್ತಿರುವುದು ಮಾದರಿಯಾಗಿದೆ ಎಂದರು.
ದೊರೆತ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಕೆಲಸ ಮಾಡುತ್ತಿರುವುದಾಗಿ ಹೇಳಿದ ಸಚಿವೆ, ರಾಜ್ಯದ ಮಂತ್ರಿಯಾಗಿದ್ದರೂ ನಿಮ್ಮ ಪಾಲಿಗೆ ನಾನು ಸಹೋದರಿಯೇ. ಕ್ಷೇತ್ರ ಅಭಿವೃದ್ಧಿಯ ದಾರಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಸೋಲಿನಲ್ಲಿಯೂ ಕೆಲಸ ಮಾಡಿದ್ದರಿಂದಲೇ ಜನರ ವಿಶ್ವಾಸ ಪಡೆದು ಭಾರೀ ಅಂತರದಿಂದ ಗೆಲುವು ಸಾಧಿಸಿದೆ ಎಂದು ಹೇಳಿದರು.
ಗೃಹ ಲಕ್ಷ್ಮೀ ಯೋಜನೆಯಿಂದ ಮಹಿಳೆಯರಲ್ಲಿ ಸ್ವಾಭಿಮಾನ ಹೆಚ್ಚುತ್ತಿರುವುದನ್ನು ನೋಡುತ್ತಿರುವುದಾಗಿ ಸಂತಸ ವ್ಯಕ್ತಪಡಿಸಿದ ಅವರು, ನಿಮ್ಮ ಸೇವೆ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯ. ಕ್ಷೇತ್ರದ ಸೇವೆಯನ್ನೇ ದೇವರ ಸೇವೆಯೆಂದು ಭಾವಿಸಿ ಕೆಲಸ ಮಾಡುತ್ತಿದ್ದೇನೆ, ಎಂದರು.
ಇದನ್ನೂ ಓದಿ:
ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ನಾವು ಮಾತಿನಲ್ಲಿ ಅಲ್ಲ, ಕೆಲಸದಲ್ಲಿ ನಂಬಿಕೆ ಇಟ್ಟವರು. ಜನರ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೇವೆ ಯಾರಿಗೂ ಅನ್ಯಾಯವಾಗಲು ಬಿಡಲ್ಲ. ಜಗಳ ಹುಟ್ಟುಹಾಕುವ ರಾಜಕಾರಣ ನಮ್ಮದಲ್ಲ, ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಧೋರಣೆ ನಮ್ಮದು,ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸಮಾಜವನ್ನು ಏಕತೆಯಿಂದ ಕಟ್ಟೋಣ. ಲಕ್ಷ್ಮೀ ಹೆಬ್ಬಾಳಕರ್ ದೂರದೃಷ್ಟಿಯ ನಾಯಕಿ, ಕ್ಷೇತ್ರದ ಅಭಿವೃದ್ಧಿಗೆ ಮುಂದಿನ 25 ವರ್ಷದ ಯೋಜನೆ ರೂಪಿಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವಂತಹ ಮೂಲಭೂತ ಕಾಮಗಾರಿಗಳೂ ನಡೆಯುತ್ತಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಚಂದ್ರಕಾಂತ ಪಾಟೀಲ, ಮನೋಹರ್ ಬಾಂಡಗಿ, ಶಿಲ್ಪಾ ಪಾಟೀಲ, ಮಾಣಿಕ್ ಸಂಕೇಶ್ವರಿ, ಪಿಡಿಒ ಆಶಾ, ನೇಮು ಪಾಟೀಲ, ಗೋಪಾಲ ಕಾಮಾಜ, ಶಿವಾಜಿ ಕಾಕತ್ಕರ್, ಈರಪ್ಪ ಚೌಗುಲೆ, ಬರ್ಮಾ ಗೌಡಕೆಚ್ಚಪ್ಪಗೋಳ, ಬಸೀರ್ ಕಿಲ್ಲೇವಾಲೆ, ವಿಠ್ಠಲ ಪಾಟೀಲ, ಗುಂಡು ಚೌಗುಲೆ, ಕೇಶವ್ ಚೌಗುಲೆ, ಸಮಿರ್ ಸನದಿ, ಅಪ್ಪಯ್ಯ ಅಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.



