ಹೊಸದಿಗಂತ ಡಿಜಿಟಲ್ ಡೆಸ್ಕ್:
8ನೇ ತರಗತಿ ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತು ಉಲ್ಲೇಖಿಸಿರುವ ವಿಷಯದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಠಿಣ ಕ್ರಮ ಕೈಗೊಂಡಿದೆ. ಸಂಬಂಧಿತ ಅಧ್ಯಾಯದ ಮುದ್ರಣ, ಮರುಮುದ್ರಣ ಹಾಗೂ ಡಿಜಿಟಲ್ ಹಂಚಿಕೆಗೆ ತಾತ್ಕಾಲಿಕ ತಡೆ ವಿಧಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ವಿಷಯವನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿ, ಪುಸ್ತಕದ ಎಲ್ಲಾ ಪ್ರತಿಗಳನ್ನು ವಾಪಸ್ ಪಡೆಯಲು ಸೂಚಿಸಿದೆ. ನ್ಯಾಯಾಂಗದ ಮಾನಹಾನಿಗೆ ಕಾರಣವಾಗುವ ವಿಷಯಗಳನ್ನು ವಿದ್ಯಾರ್ಥಿಗಳ ಪಠ್ಯದಲ್ಲಿ ಸೇರಿಸಿರುವುದನ್ನು ಕೋರ್ಟ್ ಗಂಭೀರವಾಗಿ ಟೀಕಿಸಿದೆ.
ಇದನ್ನೂ ಓದಿ:
ಸಂಬಂಧಿತ ಅಧ್ಯಾಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಸವಾಲುಗಳು, ಪ್ರಕರಣಗಳ ಬಾಕಿ ಪ್ರಮಾಣ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಉಲ್ಲೇಖಿಸಲಾಗಿತ್ತು. ಇದರಿಂದ ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆ ಕಡಿಮೆಯಾಗಬಹುದು ಎಂಬ ಆತಂಕವನ್ನು ಪೀಠ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕ್ಷಮೆಯಾಚಿಸಿ, ಪುಸ್ತಕವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಪೀಠ ಕ್ಷಮಾಪಣೆಯನ್ನು ತೃಪ್ತಿಕರವೆಂದು ಪರಿಗಣಿಸಿಲ್ಲ. ಇದರಲ್ಲಿ ಒಂದೇ ಒಂದು ಕ್ಷಮಾಪಣೆಯ ಮಾತೂ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ. ಪ್ರಕರಣದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ಕ್ರಮಗಳ ಕುರಿತು ಸ್ಪಷ್ಟನೆ ಕೇಳಲಾಗಿದೆ.



