ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 96 ರನ್ಗಳಿಂದ ಸೋಲಿಸಿ ಭಾರತ ತಂಡ ವಿಶ್ವಕಪ್ ಅನ್ನು ಎತ್ತಿ ಹಿಡಿದಿದ್ದರು.
ಇದೀಗ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್ ಹಾಗೂ ಐಸಿಸಿ ಅಧ್ಯಕ್ಷ ಜಯ್ ಶಾ ಟ್ರೋಫಿಯೊಂದಿಗೆ ಅಹಮದಾಬಾದ್ನ ಹನುಮಾನ್ ಟೆಕ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಟೀಮ್ ಇಂಡಿಯಾದ ಈ ನಡೆಗೆ ಭಾರತ ತಂಡದ ಮಾಜಿ ಆಟಗಾರ ಕೀರ್ತಿ ಆಝಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಯಾರೂ ಮುಸ್ಲಿಂ ಇಲ್ಲವಾ? ಕ್ರಿಶ್ಚಿಯನ್ಸ್ ಕೂಡ ಇಲ್ಲವಾ? ಯಾರಾದ್ರೂ ಮಸೀದಿಗೆ ತೆಗೆದುಕೊಂಡು ಹೋಗಿದ್ದಾರಾ? ಚರ್ಚ್ಗೆ ತೆಗೆದುಕೊಂಡು ಹೋಗಿದ್ದಾರಾ? ಇವರ್ಯಾಕೆ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಟೀಮ್ ಇಂಡಿಯಾ ನಾಚಿಕೆಗೇಡು… 1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ನಾವು ವಿಶ್ವಕಪ್ ಗೆದ್ದಾಗ, ನಮ್ಮ ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಆಟಗಾರರು ಇದ್ದರು. ನಾವು ಟ್ರೋಫಿಯನ್ನು ನಮ್ಮ ಧಾರ್ಮಿಕ ಜನ್ಮಸ್ಥಳವಾದ ನಮ್ಮ ಮಾತೃಭೂಮಿ ಭಾರತ ಅಥವಾ ಹಿಂದೂಸ್ತಾನ್ಗೆ ತಂದಿದ್ದೆವು.
ಇದೀಗ ಏಕೆ ಟ್ರೋಫಿಯನ್ನು ದೇವಸ್ಥಾನಕ್ಕೆ ಎತ್ತಕೊಂಡು ಹೋಗಿದ್ದಾರೆ? ಅದೇ ಯಾಕೆ ಮಸೀದಿಗೆ ಅಥವಾ ಚರ್ಚ್ ಇಲ್ಲಾ ಗುರುದ್ವಾರಗೆ ತೆಗೆದುಕೊಂಡು ಹೋಗಿಲ್ಲ. ಈ ತಂಡ ಭಾರತವನ್ನು ಪ್ರತಿನಿಧಿಸುತ್ತದೆ. ಇದರ ಬದಲಾಗಿ ಸೂರ್ಯ ಕುಮಾರ್ ಯಾದವ್ ಅಥವಾ ಜಯ್ ಶಾ ಅವರ ಕುಟುಂಬವಲ್ಲ ಎಂದು ಗರಂ ಆಗಿದ್ದಾರೆ.



