ಹೊಸದಿಗಂತ ಡಿಜಿಟಲ್ ಡೆಸ್ಕ್:
ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಇನ್ನುಮುಂದೆ ತುರ್ತು ಕರೆ ಬಂದ ಬಳಿಕ 15 ನಿಮಿಷದೊಳಗೆ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪುವಂತೆ ಹೊಸ ಮಾರ್ಗಸೂಚಿ ರೂಪಿಸಲಾಗುತ್ತಿದ್ದು, ನಿಗದಿತ ಸಮಯ ಮೀರಿ ವಿಳಂಬವಾದರೆ ಸಂಬಂಧಿತ ಆಂಬ್ಯುಲೆನ್ಸ್ ಸೇವೆಗೆ 5,000 ರೂ. ದಂಡ ವಿಧಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಈ ಬಗ್ಗೆ ಉಡುಪಿಯಲ್ಲಿ ಮಾಹಿತಿ ನೀಡಿದ ಅರೋಗ್ಯ ಸಚಿವ ಯು.ಟಿ. ಖಾದರ್, ರಸ್ತೆ ಅಪಘಾತ, ಹೃದಯಾಘಾತ, ಹೆರಿಗೆ ಸೇರಿದಂತೆ ತುರ್ತು ವೈದ್ಯಕೀಯ ಪರಿಸ್ಥಿತಿಗಳಲ್ಲಿ ಆಂಬ್ಯುಲೆನ್ಸ್ ತಡವಾಗಿ ತಲುಪುವುದರಿಂದ ಅಮೂಲ್ಯ ಸಮಯ ವ್ಯರ್ಥವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವ ಸಂಪುಟದ ಅನುಮೋದನೆಯ ಬಳಿಕ ಮೂರು ತಿಂಗಳೊಳಗೆ ಹೊಸ ವ್ಯವಸ್ಥೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಕರೆ ಬಂದ ಬಳಿಕ 15 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ತಲುಪಿದರೆ ಶೇ.90ರಷ್ಟು ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಉಳಿಸಲು ಸಾಧ್ಯ. ರಾಷ್ಟ್ರೀಯ ಮಾನದಂಡ 20 ನಿಮಿಷಗಳಾದರೂ ಕರ್ನಾಟಕವು 15 ನಿಮಿಷಗಳ ಗುರಿ ನಿಗದಿಪಡಿಸಿದೆ. ಗುರಿ ಮೀರಿ ವಿಳಂಬವಾದರೆ ದಂಡ ವಿಧಿಸಲಾಗುತ್ತದೆ. ಈ ಕುರಿತು ಶೀಘ್ರದಲ್ಲೇ ವಿವರವಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಪರಿಣಾಮಕಾರಿ ತುರ್ತು ವೈದ್ಯಕೀಯ ಸೇವೆ ಒದಗಿಸಲು ಸುಮಾರು 700 ರಿಂದ 800 ಸುಸ್ಥಿತಿಯ ಆಂಬ್ಯುಲೆನ್ಸ್ಗಳು ಅಗತ್ಯವಿದ್ದು, ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.



