May 6, 2026
Wednesday, May 6, 2026
spot_img

ಕರಾವಳಿ ಭಾಗಕ್ಕೂ ಕಾಡಿದ ಗ್ಯಾಸ್ ಟ್ರಬಲ್: ಸಿಲಿಂಡರ್ ಖಾಲಿಯಾಗಿ ಶಟರ್ ಎಳೆಯುತ್ತಿವೆ ಒಂದೊಂದೇ ಹೊಟೇಲ್ ಗಳು!


ಹೊಸದಿಗಂತ ಡಿಜಿಟಲ್ ಡೆಸ್ಕ್:


ಇಸ್ರೇಲ್- ಇರಾನ್ ನಡುವೆ ಯುದ್ದದ ಪರಿಣಾಮವಾಗಿ ಇಂಧನ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದ ಬಿಸಿ ಕರಾವಳಿಗೂ ಸಖತಾಗಿ ತಟ್ಟಿದೆ.


ಮಂಗಳೂರು, ಉಡುಪಿ, ಕಾಸರಗೋಡು ನಗರದ ಕೆಲ ಹೊಟೇಲುಗಳು ಗ್ಯಾಸ್ ಸಿಲಿಂಡರ್ ಖಾಲಿಯಾಗಿ ಬುಧವಾರ ಶಟರ್ ಎಳೆದಿವೆ. ಈ ನಡುವೆ ಪುತ್ತೂರು ಶಾಸಕ ಅಶೋಕ್ ಕುಮಾರ್ ‌ರೈ‌ ನೇತೃತ್ವದಲ್ಲಿ ಮಾ. 13ರಿಂದ 15ರ ವರೆಗೆ ಮೂರು ದಿನಗಳ ಕಾಲ ಪುತ್ತೂರಿನಲ್ಲಿ ಆಯೋಜಿಸಲಾದ ಪುತ್ತೂರು ಫುಡ್ ಫೆಸ್ಟ್ ಗ್ಯಾಸ್ ಸಿಲಿಂಡರ್ ಕೊರತೆ ಕಾರಣದಿಂದ ಮುಂದೂಡಲಾಗಿದೆ.


ಇತ್ತ ಕರಾವಳಿಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಇಲ್ಲದ ಕಾರಣ ಡೀಲರ್‌ಗಳ ಗೋದಾಮು ಖಾಲಿಯಾಗಿದೆ. ಮಂಗಳೂರು ಸೇರಿದಂತೆ ಗ್ರಾಮಾಂತರದ ನಗರ ಪ್ರದೇಶಗಳಲ್ಲಿ ಬುಧವಾರವೇ ವಾಣಿಜ್ಯ ಸಿಲಿಂಡರ್‌ಗಳ ಅಭಾವ ತಟ್ಟಿದ್ದು, ಕೆಲವು ಹೊಟೇಲ್‌ಗಳು ಬಾಗಿಲು ಮುಚ್ಚಿವೆ. ಇನ್ನೂ ಕೆಲವು ಹೊಟೇಲ್‌ಗಳು ಹಾಲಿ ಬಳಕೆಯ ಗ್ಯಾಸ್ ಸಿಲಿಂಡರ್‌ ಖಾಲಿಯಾಗುವ ವರೆಗೆ ಕಾಯುತ್ತಿವೆ. ಮತ್ತೆ ಹೊಸ ಸಿಲಿಂಡರ್‌ ಸಿಗದೇ ಇದ್ದಲ್ಲಿ ಹೊಟೇಲ್‌ ಸಂಪೂರ್ಣ ಬಂದ್‌ ಮಾಡಬೇಕಾದ ಸಂದರ್ಭ ಉಂಟಾಗಲಿದೆ.

ಕಮರ್ಷಿಯಲ್ ಗ್ಯಾಸ್ ಅಭಾವ ಹಿನ್ನೆಲೆಯಲ್ಲಿ ಏಜೆನ್ಸಿಗಳು ಗ್ಯಾಸ್ ಸಿಲಿಂಡರ್‌ ಸ್ಟಾಕ್ ಇಲ್ಲದೆ ಗೋದಾಮು ಬಂದ್‌ ಮಾಡಿವೆ. ಮಂಗಳೂರಿನ ಶ್ರೀನಿಧಿ ಭಾರತ್ ಗ್ಯಾಸ್ ಡಿಸ್ಟ್ರಿಬ್ಯೂಟರ್‌ನ ಗೋದಾಮು ಬಂದ್‌ ಆಗಿದೆ. ಇದು ಮಂಗಳೂರಿನಲ್ಲಿ ನಾನ್ ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್ ಮಾತ್ರ ಸದ್ಯ ಪೂರೈಕೆ ಮಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !