ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಯಾವುದೇ ನಿಲುವು ಹೊಂದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ವಿಶ್ವದಲ್ಲಿ ಶಾಂತಿ ನೆಲೆಸಬೇಕು. ಭಾರತದ ಸಮಾಜದಲ್ಲಿ ಈ ದೃಷ್ಟಿ ಮತ್ತು ಪ್ರಯತ್ನವಿರಬೆಕು. ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ 71 ದೇಶಗಳ ಪ್ರತಿನಿಧಿಗಳಿಗೆ ನೀವು ಯಾವ ದೇಶಗಳಲ್ಲಿ ಇದ್ದೀರೋ, ಅಲ್ಲಿನ ಆಹಾರವನ್ನು ಸೇವಿಸುತ್ತಿದ್ದೀರೋ ಆ ದೇಶವನ್ನು ಸಮರ್ಥಗೊಳಿಸುವುದೂ ನಿಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದೆವು. ಇದು ವಿಶ್ವ ಕುಟುಂಬವೆಂಬ ಹಿಂದುತ್ವದ ದೃಷ್ಟಿಯಾಗಿದೆ. ನೀವು ಭಾರತೀಯ ಮೂಲದವರಾಗಿ ಭಾರತಕ್ಕೆ ಮಾತ್ರ ನಿಷ್ಠರಾಗಿರದೆ, ನೀವು ನೆಲೆಸಿರುವ ದೇಶಗಳಲ್ಲಿನ ಕರ್ತವ್ಯಗಳನ್ನೂ ಪಾಲನೆ ಮಾಡಬೇಕು.
ಇದನ್ನೂ ಓದಿ:
ವಿಶ್ವ ಶಾಂತಿ ನಮ್ಮ ದೃಷ್ಟಿ. ಅನೇಕ ಕಾರಣಗಳಿಂದ ಯುದ್ಧಗಳು ನಡೆಯುತ್ತವೆ. ಆದರೆ ಆದಷ್ಟು ಬೇಗ ಅದು ಮುಕ್ತಾಯವನ್ನು ಕಂಡು, ಅಲ್ಲಿನ ಜನಜೀವನ ಸುಖ ಶಾಂತಿಯಲ್ಲಿ ನೆಲಸಬೇಕು ಎನ್ನುವುದು ನಮ್ಮ ಅಪೇಕ್ಷೆ. ಭಾರತದ ಸರ್ಕಾರ ಭಾರತದ ದೃಷ್ಟಿಯಿಂದ ಯಾವುದು ಹಿತಕಾರಿಯೋ ಅದನ್ನು ಮಾಡುವುದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತದೆ ಎಂಬ ವಿಶ್ವಾಸವಿದೆ.
ಸರ್ಕಾರದಲ್ಲಿರುವ ಸಚಿವರು ವಿಶ್ವದ ದೇಶಗಳೊಂದಿಗೆ ಸಂಬಂಧ, ಸಂಪರ್ಕ, ವಾಣಿಜ್ಯ, ವ್ಯವಹಾರ, ಸುರಕ್ಷತೆಯ ಕುರಿತು ಮಾತುಕತೆ ನಡೆಸುವುದರ ಜೊತೆಗೆ ರಾಷ್ಟ್ರ ಮೊದಲು ಎಂಬ ಪ್ರಧಾನ ಆಸಕ್ತಿ ಆಧಾರಿತವಾಗಿ ಕೆಲಸವನ್ನು ಮಾಡುತ್ತಿದೆ ಎಂದು ಅವರು ಹೇಳಿದರು.



