ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಯುದ್ಧ ಸಂಘರ್ಷದಿಂದಾಗಿ ಇರಾನ್ ದೇಶ ಸಂಪೂರ್ಣ ತತ್ತರಿಸಿದ್ದು, ಅಮೆರಿಕ – ಇಸ್ರೇಲ್ ಜಂಟಿ ದಾಳಿಗೆ ಅಲ್ಲಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರ ನಡುವೆ ಭಾರತವು ಮಾನವೀಯ ಮೌಲ್ಯಕ್ಕೆ ಬೆಲೆ ನೀಡುತ್ತಾ ಇರಾನ್ ಗೆ ವೈದ್ಯಕೀಯ ನೆರವು ನೀಡಿದೆ.
ಇರಾನ್ ನ ಕಷ್ಟದ ಸಮಯದಲ್ಲಿ ಭಾರತವು ತುರ್ತು ವೈದ್ಯಕೀಯ ಸಾಮಗ್ರಿಗಳು, ಔಷಧಿಗಳನ್ನು ರವಾನಿಸುವ ಮೂಲಕ ಸಹಾಯ ಮಾಡಿದೆ.
ಈ ಸಹಾಯಕ್ಕೆ ಇರಾನಿನ ರಾಯಭಾರ ಕಚೇರಿಯು ಭಾರತದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದು, ಕಷ್ಟದ ಸಮಯದಲ್ಲಿ ಜೊತೆ ನಿಂತ ಜನತೆಗೆ ಕೃತಜ್ಞತೆ ಸಲ್ಲಿಸಿದೆ.
ಈಗಾಗಲೇ ಅಮೆರಿಕ – ಇಸ್ರೇಲ್ ದಾಳಿಯ ಬಳಿಕ ಇರಾನ್ ಕೂಡ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದರ ಜೊತೆಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ ಇಡೀ ಜಗತ್ತಿಗೆ ತೈಲ ಸರಬರಾಜು ಮಾಡುವ ಜಲಮಾರ್ಗವೇ ಬಂದ್ ಮಾಡಿದೆ. ಆದರೆ ಭಾರತವು ಇರಾನ್ ಜೊತೆ ಮಾತುಕತೆ ನಡೆಸಿ ತೈಲ ಟ್ಯಾಂಕರ್ಗಳನ್ನು ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಟ ಮಾಡಲು ಅನುಮತಿ ನೀಡಲು ಮನವಿ ಮಾಡಿತ್ತು. ಇದಕ್ಕೆ ಸಮ್ಮತಿಸಿದ ಇರಾನ್ ಭಾರತದ ಹಡಗುಗಳ ಸಂಚಾರಕ್ಕೆ ಅವಕಾಶ ನೀಡಿತ್ತು. ಇದೀಗ ಭಾರತ ಸಹಾಯ ಮಾಡುವ ಮೂಲಕ ಇರಾನ್ ಜನರ ಕಷ್ಟಕ್ಕೆ ಜೊತೆಯಾಗಿದೆ.



