ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಧಗೆ ಏರುತ್ತಿರುವ ಬೆನ್ನಲ್ಲೇ, ಮಳೆರಾಯ ತಂಪಿನ ಮಳೆ ಸುರಿಸುವ ಮೂಲಕ ಜನರಿಗೆ ನೆಮ್ಮದಿ ತಂದಿದ್ದಾನೆ. ಕಳೆದ ಕೆಲವು ದಿನಗಳಿಂದ ಕರ್ನಾಟಕದ ವಿವಿಧೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗುತ್ತಿದ್ದು, ಇಂದು ಕೂಡ ವರುಣನ ಆರ್ಭಟ ಮುಂದುವರಿದಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ನಗರದ ಹಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಬಿಸಿಲಿಂದ ಕಂಗಾಲಾಗಿದ್ದ ಜನರಿಗೆ ಹಬ್ಬದ ವಾತಾವರಣ ನಿರ್ಮಿಸಿದೆ. ರಸ್ತೆಯ ಮೇಲೆ ಮುತ್ತಿನಂತೆ ಬಿದ್ದ ಆಲಿಕಲ್ಲುಗಳನ್ನು ಕಂಡು ಸಿಟಿ ಮಂದಿ ಫುಲ್ ಖುಷ್ ಆಗಿದ್ದಾರೆ.
ನಗರದ ಪ್ರಮುಖ ಕೇಂದ್ರಗಳಾದ ಮೆಜೆಸ್ಟಿಕ್, ಶಾಂತಿನಗರ, ಕಾಡುಗೋಡಿ, ಕೆ.ಆರ್. ಮಾರ್ಕೆಟ್, ಜಯನಗರ, ಬಸವೇಶ್ವರ ನಗರ, ವಿಲ್ಸನ್ ಗಾರ್ಡನ್ ಮತ್ತು ರಿಚ್ಮಂಡ್ ಟೌನ್ ಸುತ್ತಮುತ್ತ ಭಾರಿ ಮಳೆಯಾದ ವರದಿಯಾಗಿದೆ. ಈ ಅಕಾಲಿಕ ಮಳೆಯಿಂದಾಗಿ ನಗರದ ತಾಪಮಾನ ಕುಸಿದಿದ್ದು, ಇಡೀ ಬೆಂಗಳೂರು ಈಗ ‘ಕೂಲ್ ಕೂಲ್’ ಆಗಿದೆ.



