ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಹೊಸ ಚಿತ್ರದ ಶೀರ್ಷಿಕೆ ರಿವೀಲ್ ಆಗಿದ್ದು, ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ನಿರ್ದೇಶಕ ಶ್ರೀನಿವಾಸ ರಾಜು ಜೊತೆಗಿನ ಈ ಹೊಸ ಚಿತ್ರಕ್ಕೆ ‘ಬೃಂದಾವಿಹಾರಿ’ ಎಂದು ಹೆಸರು ಇಡಲಾಗಿದೆ.
ಈ ಹಿಂದೆ ಇವರಿಬ್ಬರ ಸಂಯೋಜನೆಯಲ್ಲಿ ಬಂದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರ ಯಶಸ್ಸು ಕಂಡಿತ್ತು. ಈಗ ಮತ್ತೆ ಅದೇ ಜೋಡಿ ಒಂದಾಗಿ ಕೆಲಸ ಮಾಡುತ್ತಿರುವುದು ವಿಶೇಷ. ಹೊಸ ಚಿತ್ರದ ಶೀರ್ಷಿಕೆಯಲ್ಲೂ ಕೃಷ್ಣನ ಸಂಧರ್ಭ ಮುಂದುವರಿದಿದೆ. ‘ಬೃಂದಾವನ’ ಎಂದರೆ ಶ್ರೀಕೃಷ್ಣನ ಪವಿತ್ರ ನೆಲೆ, ‘ವಿಹಾರಿ’ ಎಂದರೆ ಅಲ್ಲಿ ಸಂಚರಿಸುವವನು ಎಂಬ ಅರ್ಥ ನೀಡುತ್ತದೆ. ಹೀಗಾಗಿ ‘ಬೃಂದಾವಿಹಾರಿ’ ಎಂಬ ಶೀರ್ಷಿಕೆ ಚಿತ್ರದ ಮೇಲೆ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ:
ಚಿತ್ರದ ಕೆಲವು ಫೋಟೋಗಳು ಈಗಾಗಲೇ ಬಿಡುಗಡೆಗೊಂಡಿದ್ದು, ಅದರಲ್ಲಿ ಗಣೇಶ್ ಕೃಷ್ಣನ ಲುಕ್ನಲ್ಲಿ ಕಾಣಿಸಿಕೊಂಡಿರುವುದು ಗಮನ ಸೆಳೆಯುತ್ತಿದೆ. ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವೇಗವಾಗಿ ಸಾಗುತ್ತಿವೆ.
ಚಿತ್ರದಲ್ಲಿ ನಟಿಯರಾದ ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತ ನಿರ್ದೇಶನವನ್ನು ಹೇಶಮ್ ಅಬ್ದುಲ್ ವಹಾಬ್ ಮಾಡಿದ್ದು, ಹಾಡುಗಳ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರವು ಮತ್ತೆ ಗಣೇಶ್-ಶ್ರೀನಿವಾಸ ರಾಜು ಜೋಡಿಗೆ ಮತ್ತೊಂದು ಹಿಟ್ ತರಬಹುದೇ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ.



