ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರವು ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದರೂ, ಇದೀಗ ಕಾನೂನು ವಿವಾದಕ್ಕೆ ಸಿಲುಕಿದೆ. ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವೇ ದಿನಗಳಲ್ಲಿ ನೂರಾರು ಕೋಟಿಗಳ ಗಳಿಕೆ ಮಾಡಿದೆ.
ಆದರೆ, ಚೆನ್ನೈನ ವಕೀಲರೊಬ್ಬರು ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಚಿತ್ರದ ಪ್ರದರ್ಶನಕ್ಕೆ ತಾತ್ಕಾಲಿಕ ನಿಷೇಧ ಹೇರಬೇಕೆಂದು ಮನವಿ ಮಾಡಿದ್ದಾರೆ. ಚಿತ್ರದ ವಿಷಯ ರಾಜಕೀಯ ಅಂಶಗಳನ್ನು ಒಳಗೊಂಡಿದ್ದು, ಚುನಾವಣಾ ಸಮಯದಲ್ಲಿ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ವಾದಿಸಿದ್ದಾರೆ.
ಇದನ್ನೂ ಓದಿ:
ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆ ರಾಜಕೀಯ ಸ್ಪರ್ಶ ಹೊಂದಿರುವ ಸಿನಿಮಾಗಳ ಬಿಡುಗಡೆ ನಿಯಮ ಉಲ್ಲಂಘನೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ನ್ಯಾಯಪೀಠವು ಈ ಕುರಿತು ಅಧಿಕೃತ ರಿಟ್ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದು, ಬಳಿಕವೇ ತುರ್ತು ವಿಚಾರಣೆ ನಡೆಯಲಿದೆ ಎಂದು ತಿಳಿಸಿದೆ.
ಇದಕ್ಕೆ ಸಮಾನವಾಗಿ ವಿಜಯ್ ಅಭಿನಯದ ‘ಜನನಾಯಕನ್’ ಚಿತ್ರಕ್ಕೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು.
‘ಧುರಂಧರ್ 2’ ಕಥೆ ಕರಾಚಿಯ ಭೂಗತ ಜಗತ್ತಿನ ಹಿನ್ನೆಲೆಯಲ್ಲಿದ್ದು, ಸಂಜಯ್ ದತ್ ಹಾಗೂ ಮಾಧವನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮುಂದಿನ ಭವಿಷ್ಯ ಈಗ ನ್ಯಾಯಾಲಯದ ತೀರ್ಪಿನ ಮೇಲೆ ಅವಲಂಬಿತವಾಗಿದೆ.



