ಹೊಸದಿಗಂತ ವರದಿ ಹಾವೇರಿ :
ಬಸ್ ನಿಲ್ದಾಣದ ಕಾರಿಡಾರ್ಗೆ ನುಗ್ಗಿದ ಬಸ್ ನಿಂದಾಗಿ 2 ವರ್ಷದ ಮಗು ಸೇರಿ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಹಾವೇರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ನಡೆದಿದೆ.
ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ಬಸ್ ಅತಿ ವೇಗದಲ್ಲಿ ಬಸ್ ನಿಲ್ದಾಣಕ್ಕೆ ಬಂದಿದ್ದಲ್ಲದೇ, ಜನರ ಕಾಯುವಿಕೆಗೆ ನಿರ್ಮಿಸಿದ ಕಾರಿಡಾರ್ ಗೆ ನುಗ್ಗಿ ಮುಂದೆ ಇದ್ದ ಬೇಕರಿ ಕಟ್ಟಡಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಈ ಡಿಕ್ಕಿಯಿಂದಾಗಿ ಸವಣೂರು ಪಟ್ಟಣದ ಹಜರತ್ ಅಲಿ ( 2 ವರ್ಷ) ಎಂಬ ಮಗುವಿನ ಕಾಲಿಗೆ ಗಂಭೀರ ಗಾಯವಾಗಿದ್ದು ಪ್ರಾಥಮಿಕ ಚಿಕೀತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ಕಳಿಸಲಾಗಿದೆ. ಇನ್ನು ವಾಸುದೇವ( 44), ಹರ್ಷಾ( 6), ಕಾವ್ಯಾಂಜಲಿ ( 39) ಎಂಬುವರಿಗೆ ಗಾಯಗಳಾಗಿದ್ದು ಇವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗಾಯಾಳುಗಳು ಬಂಕಾಪುರ ಪಟ್ಟಣದ ನಿವಾಸಿಗಳು ಎನ್ನಲಾಗಿದ್ದು, ಚಾಲಕ-ಕಂಡಕ್ಟರ್ ವಿರುದ್ಧ ಆಕ್ರೋಶ ಹಿಡಿಶಾಪ ಹೊರಹಾಕಿದ್ದಾರೆ.ಸ್ಥಳದಲ್ಲಿ ನೂರಾರು ಜನರ ಸೇರಿಕೊಂಡಿದ್ದು, ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದು, ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



